ಬೆಂಗಳೂರು, ಜು. 22: ಹೈ ಕಮಾಂಡ್ ಆದೇಶದಂತೆ ಸಿಎಂ ಬಿಎಸ್ ಯಡಿಯೂರಪ್ಪ ತಮ್ಮ ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಮುಂದಾಗಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಪಕ್ಷದ ಆದೇಶ ಪಾಲಿಸುವುದು ತಮ್ಮ ಜವಾಬ್ದಾರಿ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ಪದತ್ಯಾಗಕ್ಕೆ ಹೈ ಕಮಾಂಡ್ ಸಂದೇಶ ಕಾಯುತ್ತಿರುವ ಬಗ್ಗೆ ಸುಳಿವು ನೀಡಿದ್ದಾರೆ. ಇನ್ನು ತಮ್ಮ ರಾಜೀನಾಮೆ ಬೆನ್ನಲ್ಲೇ ಬಿಎಸ್ ಯಡಿಯೂರಪ್ಪ ಈಗಾಗಲೇ ನಿಗದಿಯಾಗಿದ್ದ ಶಿವಮೊಗ್ಗ ಹಾಗೂ ಕಾರವಾರದ ಪ್ರವಾಸವನ್ನು ರದ್ದು ಮಾಡಿದ್ದಾರೆ. ಆದರೆ, ಈ ನಡುವೆ ಬೆಂಗಳೂರು ರೌಂಡ್ಸ್ಗೆ ಅವರು ಮುಂದಾಗಿದ್ದಾರೆ. ಬೆಂಗಳೂರಿನ ವಿವಿಧ ಕಡೆ ನಾಳೆ ಸಿಎಂ ಬಿಎಸ್ ವೈ ಭೇಟಿ ನೀಡಲಿದ್ದು, ಅಭಿವೃದ್ಧಿ ಕಾಮಗಾರಿಗಳು ಮತ್ತು ಮೆಟ್ರೋ ಕಾಮಗಾರಿಗಳ ಪರಿಶೀಲನೆ ನಡೆಸಲಿದ್ದಾರೆ. ಈ ನಡುವೆ ಸಿಎಂಗೆ ಇಂದು ಕೂಡ ಮಠಾಧೀಶರ ಬೆಂಬಲ ಕಾರ್ಯ ಮುಂದುವರೆದಿದೆ. ಇಂದು ತೆಲಂಗಾಣದ ವೀರಶೈವ ಲಿಂಗಾಯತ ಮಠಾಧೀಶರು ಬೆಂಬಲ ನೀಡಿದ್ದಾರೆ.
ಔತಣಕೂಟಗಳು ರದ್ದು:
ಸಿಎಂ ಬಿಎಸ್ವೈ ಅವರ ಸರ್ಕಾರ ಅಸ್ತಿತ್ವಕ್ಕೆ ಬಂದು ಜು. 26ಕ್ಕೆ ಎರಡು ವರ್ಷ ತುಂಬಲಿದೆ. ಪದತ್ಯಾಗಕ್ಕೂ ಮುನ್ನ ಸಿಎಂ ಎರಡು ವರ್ಷದ ಹಿನ್ನೆಲೆ ಔತಣ ಕೂಟ, ಶಾಸಕಾಂಗ ಪಕ್ಷದ ಸಭೆಗೆ ನಿರ್ಧರಿಸಿದ್ದರು. ಜೊತೆಗೆ ಔತಣ ಕೂಟ ಆಯೋಜಿಸಿದ್ದರು. ಆದರೆ ಇದೆಲ್ಲ ಮಾಡದಂತೆ ವರಿಷ್ಠರು ಸೂಚನೆ ಕೊಟ್ಟ ಹಿನ್ನಲೆ ಶಾಸಕಾಂಗ ಪಕ್ಷದ ಸಭೆ ಮತ್ತು ಔತಣ ಕೂಟ ರದ್ದು ಮಾಡಲಾಗಿದೆ.
ಇಂದು ಸಂಜೆ ಕ್ಯಾಬಿನೆಟ್ ಸಭೆ:
ತಮ್ಮ ನಾಯಕತ್ವ ಬದಲಾವಣೆ ಬೆನ್ನಲ್ಲೇ ಇಂದು ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಂಜೆ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಶಾಸಕಾಂಗ ಸಭೆ ರದ್ದಾದ ಬೆನ್ನಲ್ಲೆ ತಮ್ಮ ನೇತೃತ್ವದಲ್ಲಿ ಎರಡು ವರ್ಷಗಳ ಸರ್ಕಾರ ನಡೆಸಲು ಸಹಕಾರ ಕೊಟ್ಟ ಸಚಿವರಿಗೆ ಈ ಮೂಲಕ ಸಿಎಂ ಧನ್ಯವಾದ ಹೇಳಿದ್ದಾರೆ ಇದೇ ವೇಳೆ ಅವರು ಕೆಲ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ಇನ್ನು ಇಂದು ತಮ್ಮ ರಾಜೀನಾಮೆ ಸುಳಿವು ಮಾತನಾಡಿದ ಬಿಎಸ್ ಯಡಿಯೂರಪ್ಪ, ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಗೊಂದಲಕ್ಕೆ ಒಳಗಾಗುವುದು ಬೇಡ, ಮುಂದಿನ ದಿನಗಳಲ್ಲಿ ಪಕ್ಷವನ್ನು ಸದೃಢಗೊಳಿಸಿ, ಅಧಿಕಾರಕ್ಕೆ ತರುವುದು ತಮ್ಮ ಗುರಿ. ನನ್ನ ಪರವಾಗಿ ಹೇಳಿಕೆ ನೀಡುವುದೂ ಬೇಡ, ಹಾಗೆಯೇ ಕಾರ್ಯಕರ್ತರು, ಅಭಿಮಾನಿಗಳು ಪ್ರತಿಭಟನೆ ನಡೆಸುವುದೂ ಬೇಡ ಎಂದವರು ಮನವಿ ಮಾಡಿದರು. ಇಡೀ ದೇಶದಲ್ಲಿ 75 ವರ್ಷ ಮೀರಿದ ಯಾರಿಗೂ ಬಿಜೆಪಿ ಅಧಿಕಾರ ನೀಡಿಲ್ಲ, ತಮ್ಮ ಕಾರ್ಯನಿರ್ವಹಣೆ ಕೆಲಸಗಳ ಬಗ್ಗೆ ಮೆಚ್ಚುಗೆ ಹೊಂದಿದ್ದ ಪ್ರಧಾನಿ ನರೇಂದ್ರಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಇವರೆಲ್ಲ 75 ವರ್ಷ ದಾಟಿದ ತಮ್ಮನ್ನು ಮುಖ್ಯಮಂತ್ರಿ ಮಾಡಿ ನನ್ನ ಬಗ್ಗೆ ವಿಶೇಷ ಕಾಳಜಿ ತೋರಿಸಿ ಅಧಿಕಾರ ನೀಡಿದ್ದಾರೆ ಎಂದು ಹೈ ಕಮಾಂಡ್ಗೆ ಕೃತಜ್ಞತಾ ಸಲ್ಲಿಕೆ ಮಾತನಾಡಿದ್ದಾರೆ.