ಕಾಶ್ಮೀರ,ಜೂ.21: ಕೊರೊನಾ ಕಾರಣದಿಂದ ಈ ಬಾರಿ ಅಮರನಾಥ ಯಾತ್ರೆಗೆ ಅವಕಾಶ ಇಲ್ಲ. ಬದಲಿಗೆ ಭಕ್ತರು ಆನ್ಲೈನ್ ಮುಖಾಂತರ ಆರತಿ ನೆರವೇರಿಸಬಹುದು ಎಂದು ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತಿಳಿಸಿದ್ದಾರೆ. ಅಮರನಾಥ ದೇಗುಲ ಮಂಡಳಿಯೊಂದಿಗೆ ವಿಸ್ತೃತ ಚರ್ಚೆ ನಡೆಸಿದ ಬಳಿಕ ಈ ತೀರ್ಮಾನಕ್ಕೆ ಬಂದಿದ್ದಾಗಿ ಮನೋಜ್ ಸಿನ್ಹಾ ಹೇಳಿದ್ದಾರೆ.
ಹಿಂದುಗಳ ಪವಿತ್ರ ಅಮರನಾಥ ಯಾತ್ರೆಗೆ ವರ್ಷವೂ ಸಾವಿರಾರು ದೇಶದ ವಿವಿಧ ಭಾಗಗಳಿಂದ ಹೋಗುತ್ತಾರೆ. ಈ ಬಾರಿಯೂ ಜೂ.28ರಿಂದ ಪಹಲ್ಗಮ್ ಮತ್ತು ಬಾಲ್ಟಾಲ್ ಮಾರ್ಗಗಳ ಮೂಲಕ ಪ್ರಾರಂಭವಾಗಬೇಕಿತ್ತು. ಇದು 56 ದಿನಗಳ ಯಾತ್ರೆಯಾಗಿದ್ದು ಆಗಸ್ಟ್ 22ರಂದು ಮುಕ್ತಾಯವಾಗುತ್ತಿತ್ತು. ಕೊರೊನಾ ಎರಡನೇ ಅಲೆಯ ನಿಮಿತ್ತ ಈ ಮೊದಲು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿತ್ತು. ಆದರೆ ಸೋಂಕಿನ ಪ್ರಮಾಣ ತಗ್ಗದ ಕಾರಣ ಈ ಬಾರಿ ಅಮರನಾಥ ಯಾತ್ರೆ ನಡೆಸದಿರಲು ಆಡಳಿತ ತೀರ್ಮಾನಿಸಿದೆ.
ಕಳೆದವರ್ಷ 2020ರಲ್ಲಿ ಕೂಡ ಕೊವಿಡ್ 19 ಕಾರಣದಿಂದ ಅಮರನಾಥ ಯಾತ್ರೆ ರದ್ದುಗೊಳಿಸಲಾಗಿತ್ತು.