‘ಕಡಲಮುತ್ತು’ ಎಂಬ ಚಿತ್ರವು ಜನವರಿ 15ರ ಸಂಕ್ರಾಂತಿಯ ನಂತರ ಮಕರಜ್ಯೋತಿ ಫಿಲಂಸ್ ಲಾಂಛನದಲ್ಲಿ ಆರಂಭವಾಗಲಿದೆ. ಈ ಸಂಸ್ಥೆಯು ನಿರ್ಮಾಣ ಮಾಡುತ್ತಿರುವ ನೂತನ ಚಿತ್ರವನ್ನು ತಾರನಾಥ ಶೆಟ್ಟಿ ಬೋಳಾರ್ ನಿರ್ಮಾಣ ಮಾಡುತ್ತಿದ್ದಾರೆ.
ನಿಶಬ್ದ ೨ ಚಿತ್ರವನ್ನು ಯಶಸ್ವಿಯಾಗಿ ನಿರ್ಮಾಣ ಮಾಡಿರುವ ಅನುಭವ ಅವರಿಗಿದೆ. ಈ ಚಿತ್ರದ ನಿರ್ದೇಶನ ಹಾಗೂ ನಾಯಕನ ಜವಾಬ್ದಾರಿಯನ್ನು ದೇವರಾಜ್ ಕುಮಾರ್ ಮಾಡಲಿದ್ದು, ಅವರು ಡೇಂಜರ್ ಜೋನ್ ಮತ್ತು ನಿಶಬ್ದ ೨ ಹಾಗೂ ಅನುಷ್ಕಾ ನಿರ್ದೇಶನ ಮಾಡಿದ್ದಾರೆ ಹಾಗೂ ಇತ್ತೀಚೆಗೆ ತಾಜ್ ಮಹಲ್ -2 ನಿರ್ದೇಶನದೊಂದಿಗೆ, ನಾಯಕ ನಟನಾಗಿ ಪಾದಾರ್ಪಣೆ ಮಾಡಿದ್ದಾರೆ. ‘ಕಡಲಮುತ್ತು’ ಚಿತ್ರದಲ್ಲಿಯೂ ನಾಯಕನಾಗಿ ಅಭಿನಯಿಸುತ್ತಿರುವ ದೇವರಾಜ್ ಕುಮಾರ್ ಅವರೇ ಸ್ವತಃ ನಿರ್ದೇಶನವನ್ನು ಮಾಡುತ್ತಿದ್ದು, ಅವರದೇ ಕಥೆ, ಚಿತ್ರಕಥೆಯಲ್ಲಿ ಈ ಚಿತ್ರವು ಮೂಡಿ ಬರುತ್ತಿದೆ.
ದೇವರಾಜ್ ಕುಮಾರ್ ಅವರಿಗೆ ಹೊಸ ನಾಯಕಿಯಾಗಿ ನಟಿಸಲು ನೂತನ ಪ್ರತಿಭಾನ್ವೇಷಣೆಯಲ್ಲಿ ಚಿತ್ರತಂಡ ನಿರತವಾಗಿದೆ. ಈ ಚಿತ್ರದ ಕಥಾವಸ್ತು ವಿಶಿಷ್ಟವಾಗಿದ್ದು, ಸಂಪೂರ್ಣ ಚಿತ್ರೀಕರಣ ಸಮುದ್ರ ದಂಡೆಯಲ್ಲಿ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.
ವೀನಸ್ ಮೂರ್ತಿ ಛಾಯಾಗ್ರಹಣದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ವಿಕ್ರಂ ಸೆಲ್ವ ಸಂಗೀತ ನಿರ್ದೇಶನ ಮಾಡುತ್ತಿದ್ದು, ರವೀಂದ್ರ ಮುದ್ದಿ ಸಾಹಿತ್ಯ, ಚಂದ್ರು ಬಂಡೆ ಸಾಹಸ ನಿರ್ದೇಶನ, ವಿಜಯ್ ಸಂಕಲನ ಹಾಗೂ ಬಿ.ಧನಂಜಯ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. 45 ದಿನಗಳ ಕಾಲ ಮಂಗಳೂರು ಕುಂದಾಪುರ, ಉಡುಪಿ, ಕಾರವಾರ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರ ತಂಡ ತಿಳಿಸಿದೆ.