ತೂಕದಲ್ಲಿ ಭರ್ಜರಿ ಮೋಸ ಮಾಡ್ತಿದ್ದಾರೆ ಎಚ್ಚರ ! ರಾಜ್ಯದ ಹಳ್ಳಿ, ಹಳ್ಳಿ, ಗಲ್ಲಿ ಗಲ್ಲಿಗಳಲ್ಲಿ ಈ ಮೋಸದ ದಂಧೆ ಎಗ್ಗಿಲ್ಲದೆ ನಡೀತಿದೆ. ರೇಷನ್ ಅಂಗಡಿಗಳಲ್ಲೂ ತೂಕದಲ್ಲಿ ಮೋಸ ಮಾಡಿ ಬಡವರ ಹೊಟ್ಟೆಗೆ ಹೊಡೀತ್ತಿದ್ದಾರೆ. ಈ ಬಗ್ಗೆ ವಿಜಯಟೈಮ್ಸ್ಗೆ ಸಾಕಷ್ಟು ಮಂದಿ ದೂರು ನೀಡಿದ್ರು. ಇದರ ಬಗ್ಗೆ ತನಿಖೆ ನಡೆಸಲು ವಿಜಯಟೈಮ್ಸ್ ಕವರ್ಸ್ಟೋರಿ ತಂಡ ಫೀಲ್ಡಿಗಿಳಿಯಿತು.
ತೂಕದ ಯಂತ್ರದಲ್ಲಿ ಮೋಸ ನಡೀತಿದೆ ಅನ್ನೋ ಅತೀ ಹೆಚ್ಚು ದೂರು ಬಂದಿದ್ದು ಬೆಂಗಳೂರಿನ ಕೆ.ಆರ್ಪುರಂ, ಹೊರಮಾವು ಭಾಗದಲ್ಲಿ. ನಾವು ಅಲ್ಲಿಯೇ ನಮ್ಮ ಸ್ಟಿಂಗ್ ಆಪರೇಷನ್ ಸ್ಟಾಟ್ ಮಾಡಿದ್ವಿ. 5 ಕೆ.ಜಿ ತೂಕದ ಬಂಡಲ್ ಹಿಡ್ಕೊಂಡು ತೂಕದ ಯಂತ್ರ ಚೆಕ್ ಮಾಡಲು ಶುರು ಮಾಡಿದ್ವಿ. ಆಗ ನಮ್ಮ ಬಲೆಗೆ ಅನೇಕ ಖದೀಮರು ಸಿಕ್ಕಿ ಬಿದ್ರು. ಒಂದು ಅಂಗಡಿಯವನಂತು 50 ಕೆ.ಜಿಗೆ 16.250ಗ್ರಾಂ ತೂಕದಲ್ಲಿ ಮೋಸ ಮಾಡ್ತಿದ್ದ. ಈ ದಂಧೆ ಬಾರೀ ರಾಜಾರೋಷವಾಗಿ ನಡೀತಿದೆ ಅನ್ನೋದಕ್ಕೆ ಪಕ್ಕಾ ಸಾಕ್ಷಿ ಸಿಕ್ತು. ಅದಕ್ಕಾಗಿ ನಾವು ನೇರವಾಗಿ ತೂಕ ಮತ್ತು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳೊಂದಿಗೆ ಫೀಲ್ಡ್ಗಿಳಿದು ಈ ಖದೀಮರ ವಿರುದ್ಧ ಸಮರಸಾರಲು ಮುಂದಾದ್ವಿ. ನಮ್ಮ ಈ ಸಾಹಸಕ್ಕೆ ಮಾಪನ ಇಲಾಖೆ ನಿಯಂತ್ರಕಿ ರೂಪ ಅವರು ತಮ್ಮ ತಂಡವನ್ನು ಕಳುಹಿಸಿ ಕೊಟ್ರು. ಉಪನಿರ್ದೇಶಕರಾದ ಮಂಜುನಾಥ್ ಅವರ ನೇತೃತ್ವದ ತಂಡ ನಮ್ಮ ಜೊತೆ ಹೊರಮಾವು ಮುಖ್ಯ ರಸ್ತೆಯಲ್ಲಿ ದಾಳಿಗೆ ಇಳಿದೇ ಬಿಡ್ತು.
ದಾಳಿ ವೇಳೆ ತೂಕದಲ್ಲಿ ಮೋಸ ಮಾಡ್ತಿದ್ದ ಒಬ್ಬೊಬ್ಬರ ಅಸಲಿಯತ್ತು ಬಯಲಿಗೆ ಬಂತು. ಈ ಅಂಗಡಿಗಳು 16 ಕೆ.ಜಿಯಿಂದ ಹಿಡಿದು 500 ಗ್ರಾಂ ವರೆಗೆ ಮೋಸ ಮಾಡ್ತಿದ್ದ ಸತ್ಯ ಬಯಲಾಯ್ತು. ವಂಚಕರ ವಿರುದ್ಧ ಅಧಿಕಾರಿಗಳು ಕೇಸ್ ದಾಖಲಿಸಿದ್ರು.
ತೂಕದಲ್ಲಿ ಮೋಸ ಮಾಡೋ ಈ ವಂಚನಾ ಜಾಲ ಎಲ್ಲೆಡೆ ಹರಡಿದೆ ಇದರ ಮೂಲ ಹುಡುಕಲೇ ಬೇಕು. ಇದರ ಹಿಂದೆ ಯಾರು ಯಾರಿದ್ದಾರೆ ಅನ್ನೋದನ್ನ ಪತ್ತೆ ಹಚ್ಚಬೇಕು ಅಂತ ನಿರ್ಧರಿಸಿದ ನಾವು ಮತ್ತೊಂದು ರಹಸ್ಯ ಕಾರ್ಯಾಚರಣೆಗೆ ಇಳಿದ್ವಿ. ಈ ತೂಕದ ಯಂತ್ರದಲ್ಲಿ ತೂಕ ವ್ಯತ್ಯಾಸ ಮಾಡಿಕೊಡೋ ಏಜೆಂಟರನ್ನು ಪತ್ತೆ ಹಚ್ಚಿ ನಾವು ಅವರನ್ನು ನಮ್ಮ ಬಲೆಗೆ ಬೀಳಿಸಿದ್ವಿ.
ಆಗ ನಮ್ಮ ಬಲೆಗೆ ಶಿವರಾಜ್ ಅನ್ನುವ ಏಜೆಂಟ್ ಬಿದ್ದ. ಈತ ತೂಕದ ಯಂತ್ರವನ್ನು ಟ್ಯಾಂಪರ್ ಮಾಡಿ ಕೊಡುವಾತ. ಈತನನ್ನು ನಾವು ಭೇಟಿಯಾಗಿ ನಮಗೆ ಟ್ಯಾಂಪರ್ ಮಾಡಿದ ತೂಕದ ಯಂತ್ರ ಕೊಡಲು ಕೇಳಿದ್ವಿ. ಆತ ಒಪ್ಪಿಕೊಂಡು ನಮಗೆ ಯಂತ್ರಗಳನ್ನ ತಂದು ಕೊಟ್ಟ100 ರಿಂದ 1 ಕೆ.ಜಿ ವರೆಗೆ ತೂಕ ವ್ಯತ್ಯಾಸ ಮಾಡಿ ಕೊಡಲು ರೆಡಿಯಾದ. ನಮ್ಮ ಮುಂದೆಯೇ ತೂಕದಲ್ಲಿ ವ್ಯತ್ಯಾಸ ಮಾಡಿ ಕೊಟ್ಟ. ಈತ ಬೇರೆ ಬೇರೆ ಕಂಪೆನಿಗಳ ತೂಕದ ಯಂತ್ರಗಳನ್ನು ಟ್ಯಾಂಪರ್ ಮಾಡಿ ಮೋಸ ಮಾಡ್ತಿದ್ದ. ಈತನನ್ನು ಬಲೆಗೆ ಹಾಕಿದ್ರೆ, ಈತನಿಗೆ ಕುಮ್ಮಕ್ಕು ಕೊಡುವ ಕಂಪೆನಿಗಳ ಬಣ್ಣವೂ ಬಯಲಾಗುತ್ತೆ ಮತ್ತು ಈ ಮಾಫಿಯಾಕ್ಕೆ ಬೆಂಬಲ ಕೊಡೋ ಅಧಿಕಾರಿಗಳ ಕೈವಾಡವೂ ಗೊತ್ತಾಗುತ್ತೆ ಅಂತ ಯೋಚಿಸಿ ಈತನ ವಿರುದ್ಧ ಕಾರ್ಯಾಚರಣೆ ಮಾಡಿ ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಹಿಡಿದುಕೊಟ್ವಿ.
ಶಿವರಾಜ್ ನೀಡಿದ ಮಾಹಿತಿಯ ಮೇರೆ ನಾವು ಮಹಾಲಕ್ಷ್ಮಿ ಲೇಔಟ್ನಲ್ಲಿರುವ ವೆನೀಸ್ ಫ್ಯಾಕ್ಟರಿಗೆ ದಾಳಿ ಮಾಡಿದ್ವಿ. ನಿಶಾ ಟೆಕ್ನೊಲಜೀಸ್ ಹೆಸರಿನಡಿಯಲ್ಲಿ ಇಲ್ಲಿ ಡಿಜಿಟಲ್ ತೂಕದ ಯಂತ್ರಗಳನ್ನ ತಯಾರಿಸಲಾಗುತ್ತೆ. ಈ ಫ್ಯಾಕ್ಟರಿಯಲ್ಲಿ ತೂಕದ ಯಂತ್ರಗಳನ್ನು ಸುಲಭವಾಗಿ ಟ್ಯಾಂಪರ್ ಮಾಡಲು ಅವಕಾಶ ನೀಡಿರುವುದು ನಮ್ಮ ದಾಳಿಯ ವೇಳೆ ಗೊತ್ತಾಯ್ತು. ಇಲ್ಲಿ ನಾವು ಗಂಭೀರವಾದ ಅಂಶವೊಂದನ್ನು ಗಮನಿಸಿದ್ವಿ. ಶಿವರಾಜ್ ನಮಗೆ ತಂದು ಕೊಟ್ಟ ತೂಕದ ಯಂತ್ರದ ಉತ್ಪಾದನಾ ದಿನಕ್ಕೂ ಹಾಗೂ ಸರ್ಟಿಫಿಕೇಟ್ ಕೊಟ್ಟ ದಿನಕ್ಕೂ ಬಹಳ ವ್ಯತ್ಯಾಸ ಕಂಡು ಬಂದಿದೆ. ಮಾಪನ ಇಲಾಖೆ ಸರ್ಟಿಫಿಕೇಟ್ ಅನ್ನು ಯಂತ್ರ ತಯಾರಿಸೋ ಮೊದಲೇ ಎಂ.ಎಸ್ ಕುಮಾರ್ ಅನ್ನೋ ಮಾಪನ ಅಧಿಕಾರಿ ಕೊಟ್ಟಿರುವುದು ಗಮನಕ್ಕೆ ಬಂದಿದೆ. ನಮ್ಮ ಕಾರ್ಯಾಚರಣೆಯ ಉದ್ದಕ್ಕೂ ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳ ಲೋಪ ಎದ್ದುಕಂಡು ಬರುತ್ತಿತ್ತು ಅಲ್ಲದೆ ಮಾಫಿಯಾದ ಜೊತೆ ಕೆಲ ಅಧಿಕಾರಿಗಳೂ ಕೈಜೋಡಿಸಿರುವ ಅನುಮಾನವೂ ಮೂಡಲಾರಂಭಿಸಿತು. ಈ ಬಗ್ಗೆ ನಿಯಂತ್ರಕರಲ್ಲಿ ದೂರು ಕೊಟ್ಟಾಗ ಅವರು ಉನ್ನತ ತನಿಖೆಯ ಭರವಸೆಯನ್ನು ವಿಜಯಟೈಮ್ಸ್ಗೆ ನೀಡಿದ್ರು.ಅಲ್ಲದೆ ಇಂಥಾ ಪ್ರಕರಣಗಳು ಕಂಡುಬಂದಾಗ ಗ್ರಾಹಕರೂ ಎಚ್ಚೆತ್ತುಕೊಳ್ಳಬೇಕು ಎಂದು ಉಪನಿರ್ದೇಶಕರಾದ ಮಂಜುನಾಥ್ ತಿಳಿಸಿದ್ರು.
ಕಾನೂನಿನಲ್ಲಿ ಟ್ಯಾಂಪರ್ ಮಾಡುವವರ ವಿರುದ್ಧ ಕಠಿಣ ಶಿಕ್ಷೆ ಇದೆ. ಇದನ್ನು ಗ್ರಾಹಕರು ಅರಿತುಕೊಳ್ಳಬೇಕು. ಎಲ್ಲಿಯಾದ್ರೂ ತೂಕದಲ್ಲಿ ಮೋಸ ಮಾಡುವುದು ಕಂಡು ಬಂದ್ರೆ ಮಾಪನ ಶಾಸ್ತ್ರ ಇಲಾಖೆಗೆ ದೂರು ಕೊಡಬಹುದು. ಗ್ರಾಹಕರು ಈ ಕೆಳಗಿನ ದೂರವಾಣಿ ಸಂಖ್ಯೆಗೆ ದೂರು ಸಲ್ಲಿಸಬಹುದು. 080 – 22250500 , ಅಥವಾ ಸಹಾಯಕ ನಿಯಂತ್ರಕರು – 9481907199. ಈ ಮೇಲ್ ವಿಳಾಸ. Dlm.kar.clm@gmail.com