ಚಿಕ್ಕಬಳ್ಳಾಪುರ (ಅ. 20): ಆಸ್ತಿ ವಿಚಾರಕ್ಕಾಗಿ ಹೆತ್ತ ತಾಯಿಯನ್ನೇ ಆಕೆಯ ಮಗ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಘಟನೆ ನಗರದಲ್ಲಿ ನಡೆದಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಹೆತ್ತ ತಾಯಿಯನ್ನೆ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಘಟನೆ ಜಿಲ್ಲಾ ಕೇಂದ್ರದಲ್ಲಿ ನಡೆದಿದ್ದು, ಇಬ್ಬರು ಸುಪಾರಿ ಹಂತಕರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೊಲೆಗೀಡಾದ ಮಹಿಳೆಯನ್ನು ನಳಿನಾ ಕೋಂ ಲೇಟ್ ರಾಮಕೃಷ್ಣ (55) ಎಂದು ಗುರುತಿಸಲಾಗಿದೆ. ಕೊಲೆಗೀಡಾದ ಮಹಿಳೆಯ ಪುತ್ರನೇ ಈ ಕೊಲೆ ಮಾಡಿಸಿರುವ ಶಂಕೆ ವ್ಯಕ್ತವಾಗಿದ್ದು ಸದ್ಯ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಇಬ್ಬರು ಕೊಲೆ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಜಿಲ್ಲಾ ಕೇಂದ್ರದ ಧರ್ಮಛತ್ರ ರಸ್ತೆಯಲ್ಲಿ ಒಂಟಿಯಾಗಿ ವಾಸ ಇರುವ ನಳಿನಾ ರವರು ಕಳೆದ ಶುಕ್ರವಾರ ನವರಾತ್ರಿ ಪ್ರಯುಕ್ತ ದೇವಾಲಯಕ್ಕೆ ಬಂದು ಸುಮಾರು 8.45 ರ ಸುಮಾರಿನಲ್ಲಿ ಮನೆಗೆ ಹಿಂತಿರುಗಿದ್ದರು. ಈ ವೇಳೆ ಸುಪಾರಿ ಹಂತಕರು ಆಕೆಯನ್ನು ಹಿಂಬಾಲಿಸಿ ಮನೆಯೊಳಗೆ ನುಗ್ಗಿ ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾರೆ. ತಕ್ಷಣ ಅಕ್ಕಪಕ್ಕದ ಜನ ಮನೆ ಹತ್ತಿರ ಬಂದ ತಕ್ಷಣ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರು ಹಂತಕರನು ಜನ ಸಾರ್ವಜನಿಕರು ಹಿಡಿದು ಚೆನ್ನಾಗಿ ಥಳಿಸಿ ಬಳಿಕ ನಗರ ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ. ಆದರೆ ನಳಿನಾ ತೀವ್ರ ರಕ್ತಸಾವ್ರವಾಗಿ ಮನೆಯಲ್ಲಿಯೇ ಮೃತಪಟ್ಟಿದ್ದಾರೆ.