ಚಿಕ್ಕಮಗಳೂರು ಸೆ 24 : ಹೆತ್ತ ಮಗನೇ ಮಚ್ಚಿನಿಂದ ತಾಯಿಯನ್ನು ಕೊಚ್ಚಿ ಹಾಕಿ ಹೆಣದ ಪಕ್ಕ ಕುಳಿತಿದ್ದ ಧಾರುಣ ಘಟನೆ ನಗರದ ಗೌರಿ ಕಾಲುವೆಯಲ್ಲಿ ನಡೆದಿದ್ದು, ಈ ಘಟನೆಯಿಂದಾಗಿ ಇಡೀ ಮಲೆನಾಡು ತಲ್ಲಣಗೊಂಡಿದೆ.
ಹೆತ್ತ ಮಗನೇ ಮಚ್ಚಿನಿಂದ ತಾಯಿಯನ್ನು ಕೊಚ್ಚಿ ಹಾಕಿ ಹೆಣದ ಪಕ್ಕ ಕುಳಿತಿದ್ದ ಘಟನೆ ಚಿಕ್ಕಮಗಳೂರು ನಗರದ ಗೌರಿ ಕಾಲುವೆಯಲ್ಲಿ ಗುರುವಾರ ನಡೆದಿದೆ. ಕೊಲೆಗೈದ ಪುತ್ರನನ್ನು ದುಷ್ಯಂತ್ ಎಂದು ಗುರುತಿಸಲಾಗಿದೆ. ಮಧ್ಯಾಹ್ನದ ವೇಳೆಗೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸಂಜೆಯ ವೇಳೆ ಇನ್ನೊಬ್ಬ ಪುತ್ರ ಮನೆಗೆ ಬಂದಾಗ ಈ ಕೊಲೆಯ ಕೃತ್ಯ ಬೆಳಕಿಗೆ ಬಂದಿದೆ.
ಮೂಲತಃ ಚಿಕ್ಕಮಗಳೂರು ಸಮೀಪದ ಇಂದಾವರ ನಿವಾಸಿಯಾಗಿದ್ದ ಸುಧಾ, ಇತ್ತೀಚಿಗೆ ಅಪಘಾತದಲ್ಲಿ ಪತಿಯನ್ನ ಕಳೆದುಕೊಂಡಿದ್ರು. ಹೀಗಾಗಿ ಎರಡು ವರ್ಷಗಳಿಂದ ನಗರದ ಗೌರಿಕಾಲುವೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪ್ರಾವಿಷನ್ ಸ್ಟೋರ್ ಒಂದರಲ್ಲಿ ಕೆಲಸ ಮಾಡಿಕೊಂಡು ಸಂಸಾರ ಸಾಗಿಸುತ್ತಿದ್ದರು. ಎಂಜಿನಿಯರಿಂಗ್ ಓದಿದ್ದ ಕಿರಿ ಮಗ, ಸದ್ಯ ವರ್ಕ್ ಫ್ರಮ್ ಹೋಂ ಕೆಲಸ ಮಾಡಿಕೊಂಡು ತಾಯಿಗೆ ನೆರವಾಗಿದ್ದ. ಇನ್ನೂ ಹಿರಿಮಗ ಸ್ವಲ್ಪ ಅಬ್ನಾರ್ಮಲ್ ಆಗಿ ವರ್ತನೆ ಮಾಡ್ತಿದ್ದರಿಂದ ಅವನನ್ನ ಸಂಬಾಳಿಸೋದು ಸುಧಾರಿಗೆ ದೊಡ್ಡ ಸವಾಲಾಗಿತ್ತು. ಕೆಲವೊಮ್ಮೆ ಮಾನಸಿಕ ಅಸ್ವಸ್ಥ ನಂತೆ ವರ್ತಿಸುತ್ತಿದ್ದ ದುಷ್ಯಂತ್, ಯಾವ ಕಾರಣದಿಂದಾಗಿ ತಾಯಿ ಸುಧಾ ಅವರನ್ನು ಹತ್ಯೆಗೈದಿದ್ದಾನೆ ಎಂಬುದು ತನಿಖೆ ನಂತರದಲ್ಲಿ ತಿಳಿಯಬೇಕಿದೆ.ಬಸವನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.