- ಮಧ್ಯರಾತ್ರಿ ಮೇಘಸ್ಫೋಟದಿಂದ ಡೆಹ್ರಾಡೂನ್ ಜಲಾವೃತ
- ತಪೋವನ್, ಸಹಸ್ರಧಾರಾ ಹಾಗೂ ಐಟಿ ಪಾರ್ಕ್ ಪ್ರದೇಶಗಳಲ್ಲಿ ಭಾರೀ ಹಾನಿ
- ಡೆಹ್ರಾಡೂನ್ನಲ್ಲಿ ಪ್ರಕೃತಿಯ ಪ್ರಹಾರ: ಪ್ರವಾಹದಿಂದ ಜನತೆ ಸಂಕಷ್ಟದಲ್ಲಿ (Cloudburst in Dehradun)
Dehradun: ಉತ್ತರಾಖಂಡ್ನ ಡೆಹ್ರಾಡೂನ್ನಲ್ಲಿ ಸೆಪ್ಟೆಂಬರ್ 15ರ ಮಧ್ಯರಾತ್ರಿ ಅಕಸ್ಮಿಕವಾಗಿ ಮೇಘಸ್ಫೋಟ(Cloudburst) ಸಂಭವಿಸಿದೆ. ಈ ಆಕಸ್ಮಿಕ ಭಾರೀ ಮಳೆಯಿಂದ ತಪೋವನ್,
ಸಹಸ್ರಧಾರಾ ಮತ್ತು ಐಟಿ ಪಾರ್ಕ್ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಅಲ್ಲಿ ವಾಸಿಸುತ್ತಿದ್ದ ಜನರ ಮನೆಗಳು ಹಾಗೂ ಅಂಗಡಿಗಳಿಗೆ ನೀರು ನುಗ್ಗಿ ಹಾನಿಯಾಗಿದೆ.
ಪ್ರವಾಹದಲ್ಲಿ ಇಬ್ಬರು ನಾಗರಿಕರು ಕೊಚ್ಚಿ ಹೋಗಿದ್ದು, ಅವರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಇನ್ನು ಮೇಘಸ್ಫೋಟ ಎಂದರೆ ಕೆಲವೇ ಸಮಯದಲ್ಲಿ ಅತೀವ ಮಳೆ ಸುರಿಯುವ ಪರಿಸ್ಥಿತಿ. ಡೆಹ್ರಾಡೂನ್ನಲ್ಲಿ ಇದೇ ದೃಶ್ಯ ಕಂಡುಬಂದಿದ್ದು, ಸಣ್ಣ ಹೊಳೆಗಳು ಕೂಡ ಕ್ಷಣಾರ್ಧದಲ್ಲಿ ಪ್ರಬಲ ನದಿಗಳಾಗಿ ಹರಿಯಲು ಆರಂಭಿಸಿದವು.
ವಿಶೇಷವಾಗಿ ಕಾರಿಗಾಡ್ ತೊರೆಯ ನೀರು ಅತ್ಯಧಿಕ ಪ್ರಮಾಣದಲ್ಲಿ ಹೆಚ್ಚಾಗಿ, ಸುತ್ತಮುತ್ತಲಿನ ಪ್ರದೇಶಗಳು ಪ್ರವಾಹಕ್ಕೆ ತುತ್ತಾದವು. ಎತ್ತರ ಪ್ರದೇಶಗಳಲ್ಲಿ ಸುರಿದ ಮಳೆ ನೀರೆಲ್ಲಾ ತೊರೆಯಲ್ಲಿ ಸೇರುವುದರಿಂದ
ಅದರ ಹರಿವು ನಿಯಂತ್ರಣ ತಪ್ಪಿ, ಹತ್ತಿರದ ಮನೆಗಳು ಮತ್ತು ಅಂಗಡಿಗಳಿಗೆ ನುಗ್ಗಿತು. ಸಹಸ್ರಧಾರಾ(Sahasradhara) ಪ್ರದೇಶದಲ್ಲಿ ಮನೆಗಳಿಗೆ ಭಾರೀ ಹಾನಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮೇಘಸ್ಫೋಟದ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಡಳಿತ ತಕ್ಷಣ ಕಾರ್ಯಪ್ರವೃತ್ತವಾಯಿತು. ಪೀಡಿತ ಪ್ರದೇಶಗಳಿಗೆ ಸಿಬ್ಬಂದಿ ಹಾಗೂ ರಕ್ಷಣಾ ದಳಗಳನ್ನು ಕಳುಹಿಸಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.
ನೀರಿನಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ತಂಡಗಳು ನಿರಂತರವಾಗಿ ಶ್ರಮಿಸುತ್ತಿವೆ. ಇಬ್ಬರು ನಾಗರಿಕರು ಇನ್ನೂ ಪತ್ತೆಯಾಗದಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಪ್ರವಾಹದಿಂದ ಹಾನಿಗೊಳಗಾದ ಕುಟುಂಬಗಳಿಗೆ ತಾತ್ಕಾಲಿಕ ಆಶ್ರಯ ಹಾಗೂ ಪರಿಹಾರ ಒದಗಿಸುವ ಕೆಲಸವೂ ಆರಂಭವಾಗಿದೆ.
ಉತ್ತರಾಖಂಡ್(Uttarakhand) ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ(Pushkar Singh Dhami) ಈ ಘಟನೆಗೆ ತಕ್ಷಣ ಪ್ರತಿಕ್ರಿಯಿಸಿದ್ದು,
“ನಾನು ಸ್ಥಳೀಯ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಮತ್ತು ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
ಹಾನಿಗೊಳಗಾದ ಮನೆಗಳು ಹಾಗೂ ವ್ಯಾಪಾರಿಗಳಿಗೆ ಸರಕಾರದ ವತಿಯಿಂದ ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಜನರಲ್ಲಿ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ತಕ್ಷಣದ ಪರಿಹಾರ ಕ್ರಮಗಳು ನಡೆಯುತ್ತಿರುವುದು ಕೊಂಚ ಮಟ್ಟಿಗೆ ನೆಮ್ಮದಿ ನೀಡಿದೆ.
ಮೇಘಸ್ಫೋಟದ ಬಳಿಕವೂ ಅಪಾಯ ಕಡಿಮೆಯಾಗಿಲ್ಲ ಎಂದು ಹವಾಮಾನ ಇಲಾಖೆ(Meteorological Department) ಎಚ್ಚರಿಸಿದೆ. ಮುಂದಿನ ಕೆಲವು ಗಂಟೆಗಳಲ್ಲಿ ಇನ್ನೂ ಭಾರೀ ಮಳೆಯಾಗುವ ಸಾಧ್ಯತೆ ಇದ್ದು,
ಗಂಟೆಗೆ 15 ಮಿಮೀ ಗಿಂತ ಹೆಚ್ಚಿನ ಮಳೆ ಸುರಿಯಬಹುದೆಂದು ಮುನ್ಸೂಚನೆ ನೀಡಲಾಗಿದೆ. ಜೊತೆಗೆ ಗಂಟೆಗೆ 87 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಂಭವವಿದೆ.
ಇದನ್ನು ಓದಿ : ಉತ್ತರ ಭಾರತದಲ್ಲಿ ಮೇಘಸ್ಫೋಟ: ಪಂಜಾಬ್, ಜಮ್ಮು-ಕಾಶ್ಮೀರ, ಹಿಮಾಚಲದಲ್ಲಿ ಜನಜೀವನ ಅಸ್ತವ್ಯಸ್ತ
ಗುಡುಗು-ಮಿಂಚು ಸಹಿತ ಮಳೆ ಸಂಭವಿಸಬಹುದಾದ ಕಾರಣ ಸ್ಥಳೀಯರಿಗೆ ಎಚ್ಚರಿಕೆ ನೀಡಲಾಗಿದೆ. (Cloudburst in Dehradun)