ಬೆಂಗಳೂರು, ಜೂ. 03; ಕೊರೋನಾ ಸೋಂಕು ಬೆಂಗಳೂರಿನಲ್ಲಿ ನಿಯಂತ್ರಣಕ್ಕೆ ಬಂದರೂ ಗ್ರಾಮೀಣ ಭಾಗಗಳಲ್ಲಿ ನಿಯಂತ್ರಣಕ್ಕೆ ಬರದೇ ಇರುವುದರಿಂದ, ಸೋಂಕು ನಿಯಂತ್ರಣದ ದೃಷ್ಟಿಯಿಂದ ಲಾಕ್ಡೌನ್ ಅನ್ನು ಮತ್ತೆ ಒಂದು ವಾರ ವಿಸ್ತರಣೆ ಮಾಡಲಾಗಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು ದೃಢಪಡಿಸಿದ್ದಾರೆ. ಅಲ್ಲದೆ, ಕಾರ್ಮಿಕರು ಸೇರಿದಂತೆ ವಿವಿಧ ವಲಯದ ಜನರಿಗೆ ರೂ.500 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಈಗಾಗಲೇ ಜೂನ್ 7ರವರೆಗೆ ಜಾರಿಯಲ್ಲಿದ್ದ ಲಾಕ್ಡೌನ್ನ್ನು ಜೂನ್ 14ರವರೆಗೆ ವಿಸ್ತರಿಸಿದ್ದಾರೆ. 5 ಗಂಟೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಆದೇಶವನ್ನು ಸಿಎಂ ಬಿ. ಎಸ್ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ಅಧೀಕೃತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಲಾಕ್ಡೌನ್ ನ 500 ಕೋಟಿ ವಿಶೇಷ ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೀಡಿದ ಪ್ಯಾಕೇಜ್ ವಿವರ ಈ ಕೆಳಗಿನಂತಿದೆ:
- ಕೈಮಗ್ಗ ಕಾರ್ಮಿಕರಿಗೆ ತಲಾ 3000ರೂ. ಪರಿಹಾರ
- ಚಲನಚಿತ್ರ ಕಲಾವಿದರಿಗೆ 3000 ರೂ. ಪರಿಹಾರ
- ಮೀನುಗಾರರಿಗೆ 3000 ರೂ. ಪರಿಹಾರ
- ಮುಜುರಾಯಿ ದೇವಸ್ಥಾನ ಅರ್ಚಕರು ಅಡುಗೆಯವರು ಹಾಗೂ ಸಿ ಗ್ರೂಪ್ ನೌಕರರಿಗೆ 3000ರೂ. ಪರಿಹಾರ
- ಆಶಾ ಕಾರ್ಯಕರ್ತರಿಗೆ 3000 ರೂ. ಪರಿಹಾರ
- ಅಂಗನವಾಡಿ ಕಾರ್ಯಕರ್ತರು ಸಹಾಯಕರಿಗೆ 2000 ರೂ. ಪರಿಹಾರ
- ಅನುದಾನರಹಿತ ಶಾಲಾ ಶಿಕ್ಷಕರಿಗೆ 5000 ರೂ. ಪರಿಹಾರ
- ಪವರ್ ಲೂಂ ನೌಕರರಿಗೆ ತಲಾ 2000 ರೂ. ಪರಿಹಾರ
- ಚಲನಚಿತ್ರ ಹಾಗೂ ದೂರದರ್ಶನ ಕಲಾವಿದರಿಗೆ ತಲಾ 3000 ರೂ. ಪರಿಹಾರ
- ತಲಾ ಮೂರು ಸಾವಿರದಂತೆ ಮಗ್ಗಗಳ ಕಾರ್ಮಿಕರಿಗೆ ಪರಿಹಾರ
ಅದಲ್ಲದೇ ಎಂಎಸ್ ಎಂಇ ಕೈಗಾರಿಕೆಗಳ ವಿದ್ಯುತ್ ಶುಲ್ಕ ವಿನಾಯಿತಿ, ಇತರ ಕೈಗಾರಿಕೆಗಳು ಮೇ,ಜೂನ್ ಶುಲ್ಕ ವಿನಾಯಿತಿ, ರಫ್ತು ಓರಿಯಂಟ್ ಕೈಗಾರಿಕೆಗೆ ಅನುಮತಿ. ಹೋಟೆಲ್ಗಳು ಇಡೀ ದಿನ ತೆರೆದಿರಲಿದ್ದು, ಪಾರ್ಸಲ್ಗೆ ಮಾತ್ರ ಅನುಮತಿ ನೀಡಲಾಗಿದೆ” ಎಂದು ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಇಂದು 500 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಅಲ್ಲದೇ ಲಾಕ್ಡೌನ್ ಷರತ್ತುಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ, ಶೇ. 05ರಷ್ಟು ಪಾಸಿಟಿವಿಟಿ ಕಡಿಮೆಯಾದರೆ 07 ದಿನಗಳ ಬಳಿಕ ಲಾಕ್ಡೌನ್ ಸಡಿಲಿಕೆಯ ಬಗ್ಗೆ ಚಿಂತನೆ ಎಂದು ಹೇಳಿದ್ದಾರೆ.
ಈ ಘೋಷಣೆಯಲ್ಲಿ ಅನುದಾನ ರಹಿತ ಶಾಲಾ ಶಿಕ್ಷಕರಿಗೆ 5,000ರೂ. ಪರಿಹಾರ ಘೋಷಣೆ ಮಾಡಿದೆ. ಆದರೆ, ಇದರ ವಿರುದ್ಧ ಕಿಡಿಕಾರಿರುವ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, “ಕೇವಲ ಐದು ಸಾವಿರ ಘೋಷಣೆ ತುಂಬ ನಿರಾಸೆ ತಂದಿದೆ. ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಅನುದಾನವಿದೆ. ಶಿಕ್ಷಕರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಸಹಾಯ ಮಾಡಬೇಕು. ಕನಿಷ್ಟ ಹತ್ತು ಸಾವಿರ ಆದರೂ ಪರಿಹಾರ ಘೋಷಣೆ ಮಾಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.