ಬೆಂಗಳೂರು, ಮೇ. 29: ಕೊರೋನಾ ಸೋಂಕು ಹೆಚ್ಚಿರುವ ಜಿಲ್ಲೆಗಳ ಜನಪ್ರತಿನಿಧಿಗಳ ಜೊತೆ ಸಿಎಂ ಬಿ.ಎಸ್. ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಲಾಗಿದ್ದು, ಶಾಸಕರು, ಸಂಸದರು, ಪರಿಷತ್ ಸದಸ್ಯರು, ರಾಜ್ಯಸಭೆ ಸದಸ್ಯರ ಜೊತೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಂವಾದ ನಡೆಸಿದ್ದಾರೆ. ಮೈಸೂರು, ಹಾಸನ, ಬೆಳಗಾವಿ, ಕಲ್ಬುರ್ಗಿ, ಮತ್ತು ವಿಜಯಪುರ ಜಿಲ್ಲೆಗಳ ಜನಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಜಿಲ್ಲೆಗಳಲ್ಲಿ ಕೋವಿಡ್ ಸ್ಥಿತಿಗತಿ ಬಗ್ಗೆ ಮಹತ್ವದ ಸಮಾಲೋಚನೆ ನಡೆಸುತ್ತಿದ್ದಾರೆ. ವಿಡಿಯೋ ಕಾನ್ಪೆರೆನ್ಸ್ ನಲ್ಲಿ ಡಿಸಿಎಂ ಗಳಾದ ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ್, ಸಚಿವ ಆರ್ ಅಶೋಕ್, ಸರ್ಕಾರದ ಮುಖ್ಯಕಾರ್ಯದರ್ಶಿ ಪಿ ರವಿಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ. ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜೊತೆ ಸಿಎಂ ಸಂವಾದ ನಡೆಸಿದ್ದಾರೆ. ಸೋಂಕು ಹೆಚ್ಚಿರುವ ಹಳ್ಳಿಗಳ ಮೇಲೆ ನಿಗಾ ವಹಿಸುವಂತೆ ಸಿಎಂ ಬಿಎಸ್ವೈ ಸೂಚನೆ ನೀಡಿದ್ದಾರೆ. ಹಳ್ಳಿಗಳಲ್ಲಿ ಸೋಂಕು ಹೆಚ್ಚಾಗಿದ್ದಲ್ಲಿ ಅಲ್ಲಿ ಅಗತ್ಯ ಚಿಕಿತ್ಸೆ ಕ್ರಮ ವಹಿಸಬೇಕು. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಕಡಿಮೆ ಸೋಂಕು ಇರುವ ಹಳ್ಳಿಗಳಲ್ಲಿ ಇನ್ಮುಂದೆ ಸೋಂಕು ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಈಗಾಗಲೇ ಸರ್ಕಾರದಿಂದ ಎಲ್ಲ ರೀತಿಯ ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ. ಅದನ್ನು ಬಳಸಿಕೊಂಡು ಕೊವೀಡ್ ಕಡಿಮೆ ಮಾಡಲು ಕ್ರಮ ವಹಿಸಬೇಕು. ನಗರ ಪ್ರದೇಶಗಳಲ್ಲಿ ಕೊವೀಡ್ ಹೆಚ್ಚಳವಾಗದ ರೀತಿ ಶ್ರಮ ವಹಿಸಬೇಕು. ಇವತ್ತಿನ ಸಭೆಯಲ್ಲಿ ಜನಪ್ರತಿನಿಧಿಗಳು ಸಲಹೆ ಕೊಡಿ ಎಂದು ಸಿಎಂ ಯಡಿಯೂರಪ್ಪ ಸೂಚಿಸಿದರು.
ಸಭೆ ಆರಂಭದಲ್ಲಿ ಮಾತನಾಡಿದ ಸಿಎಂ, ಕೋವಿಡ್ ಎರಡನೇ ಅಲೆ ನಿರೀಕ್ಷೆಗೂ ಮೀರಿ ಹೆಚ್ಚಾಗಿದೆ. ಸದ್ಯ ಪ್ರಕರಣಗಳು ಕಡಿಮೆ ಆಗ್ತಿರೋದು ನೆಮ್ಮದಿ ವಿಚಾರ. ಕೇಸ್ ಕಡಿಮೆ ಆಗ್ತಿದೆ ಎಂದು ಕೈಕಟ್ಟಿ ಕೂರುವಂತಿಲ್ಲ. ಹಳ್ಳಿಗಳಲ್ಲಿ ಟೆಸ್ಟ್ ಹೆಚ್ಚೆಚ್ಚು ನಡೆಸಬೇಕು. ಅಗತ್ಯ ಔಷಧಿಗಳನ್ನ ಆಸ್ಪತ್ರೆಗಳಿಗೆ ಒದಗಿಸಬೇಕು ಎಂದು ಹೇಳಿದರು.
ಮೈಸೂರು ಡಿಸಿ ವಿರುದ್ಧ ಸಾರಾ ಮಹೇಶ್ ಕಿಡಿ:
ವಿಡಿಯೋ ಕಾನ್ಫೆರೆನ್ಸ್ನಲ್ಲಿಯೂ ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಸಿಡಿದೆದ್ದರು. ವೀಡಿಯೋ ಕಾನ್ಪೆರೆನ್ಸ್ ನಲ್ಲಿ ಮತ್ತೆ ಡಿಸಿ ವಿರುದ್ದ ಸಾರಾ ಆರೋಪ ಮಾಡಿದರು. ಗ್ರಾಮೀಣ ಪ್ರದೇಶಗಳಿಗೆ ಡಿಸಿ ಬರುತ್ತಿಲ್ಲ. ಈ ಬಗ್ಗೆ ಸಿಎಂ ಗಮನ ಹರಿಸಬೇಕು ಎಂದು ಸಾರಾ ಒತ್ತಾಯ ಮಾಡಿದರು.
ಪ್ರತಾಪ್ ಸಿಂಹ, ಎಸ್ಟಿ ಸೋಮಶೇಖರ್ ಉತ್ತಮ ಸಹಕಾರ ಕೊಟ್ಟಿದ್ದಾರೆ. ಆದ್ರೆ ಜಿಲ್ಲಾಧಿಕಾರಿಗಳು ಗ್ರಾಮೀಣ ಭಾಗಕ್ಕೆ ಬರುತ್ತಿಲ್ಲ, ನಮ್ಮ ಕ್ಷೇತ್ರದಲ್ಲಿ ಸಾಕಷ್ಟು ಜನ ಸಾವನ್ನಪ್ಪಿದರೂ ಯಾರು ಬರುತ್ತಿಲ್ಲ. ಜಿಲ್ಲಾಧಿಕಾರಿಗಳು ಗ್ರಾಮೀಣ ಪ್ರದೇಶಗಳಿಗೆ ಹೋಗುವಂತೆ ನೀವು ಸೂಚನೆ ಕೊಡಿ ಎಂದು ಸಿಎಂಗೆ ಸಾರಾ ಮಹೇಶ್ ಮನವಿ ಮಾಡಿದರು. ಮೈಸೂರು ಜಿಲ್ಲೆಯಲ್ಲಿ ಔಷಧಿ ಕೊರತೆ ಇದೆ. ಈ ಬಗ್ಗೆ ಗಮನ ಹರಿಸಬೇಕೆಂದು ಸಭೆಯಲ್ಲಿ ಎಸ್.ಎ.ರಾಮದಾಸ್ ಮನವಿ ಮಾಡಿದರು. ಗ್ರಾಮೀಣ ಭಾಗದಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಹುಣಸೂರು ಶಾಸಕ ಮಂಜುನಾಥ್ ಸಭೆಯಲ್ಲಿ ಸಿಎಂ ಗಮನಕ್ಕೆ ತಂದರು. ಗ್ರಾಮಗಳಲ್ಲಿ ಟೆಸ್ಟಿಂಗ್ ಹೆಚ್ಚಿಸಿ, ಬೇಕಾದ ಔಷಧಿ ಒದಗಿಸಿ ಹಾಗೂ ಗ್ರಾಮಗಳಲ್ಲಿ ಆ್ಯಕ್ಸಿಜನ್ ಬೆಡ್ ಮಾಡುವಂತೆ ಶಾಸಕ ಶಾಸಕ ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು. ಮೈಸೂರು ಜಿಲ್ಲೆಗೆ ಹೆಚ್ಚಿನ ವ್ಯಾಕ್ಸಿನ್ ಕಳುಹಿಸಿಕೊಡಿ ಎಂದು ಜಿಡಿ ದೇವೇಗೌಡ ವಿನಂತಿಸಿದರು.
ವೈದ್ಯರ ಕೊರತೆ ಇದೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್ :
ಲಕ್ಷ್ಮಿ ಹೆಬ್ಬಾಳ್ಕರ್ ವೈದ್ಯರ ಕೊರತೆ ಬಗ್ಗೆ ಹೇಳಿ ಸಿಎಂ ಗಮನ ಸೆಳೆದರು. ವ್ಯಾಕ್ಸಿನ್, ಟೆಸ್ಟಿಂಗ್ ಹೆಚ್ಚು ಮಾಡುವಂತೆ ಮನವಿ ಮಾಡಿದರು. ಆಶಾ ಕಾರ್ಯಕರ್ತೆಯರಿಗೆ ಆದಷ್ಟೂ ಬೇಗ ಸಂಬಳ ನೀಡಿ ಎಂದು ಹೆಬ್ಬಾಳ್ಕರ್ ಸಿಎಂ ಬಳಿ ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಈಗಾಗಲೇ ಬಿಡುಗಡೆ ಮಾಡಿದ್ದೇನೆ ಎಂದರು. ಅದಕ್ಕೆ ಹೆಬ್ಬಾಳ್ಕರ್ ಸಿಎಂಗೆ ಅಭಿನಂದನೆ ಸಲ್ಲಿಸಿದರು.