ಬೆಂಗಳೂರು,ಫೆ 18: ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ನೂತನ ಆಡಳಿತ ಕಚೇರಿ ಕಟ್ಟಡವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು.
ಈ ಹಿಂದೆ ಇದ್ದ 50 ವರ್ಷಗಳ ಹಳೆಯ ಕಟ್ಟಡವನ್ನು ಕೆಡವಿ 3.76 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದ್ದು, ಕಚೇರಿಯ ಆಡಳಿತದ ಕಾರ್ಯ ಚಟುವಟಿಕೆ ಇಲ್ಲಿ ನಡೆಯುತ್ತದೆ.
ಈ ವೇಳೆ ಮಾತನಾಡಿದ ಸಚಿವ ಎಸ್.ಟಿ. ಸೋಮಶೇಖರ್, ರಾಜ್ಯ ಉಗ್ರಾಣ ಸಹಕಾರ ಇಲಾಖೆಯ ಅಧೀನ ಸಂಸ್ಥೆಯಾಗಿದೆ. ಇದರಲ್ಲಿ ರಾಜ್ಯದಷ್ಟೇ ಪಾಲನ್ನು ಕೇಂದ್ರ ಸಹ ಹೊಂದಿದೆ. ಇದನ್ನು ರೈತರ ಉಪಯೋಗಕ್ಕಾಗಿ ನಾವು ಸ್ಥಾಪನೆ ಮಾಡಿದ್ದು, ಇದರಿಂದ ಕೋಟ್ಯಂತರ ರೈತರಿಗೆ ಇದುವರೆಗೆ ಉಪಯೋಗವಾಗಿದೆ. ಕಡಿಮೆ ಬೆಲೆ ಇದ್ದಾಗ ರೈತರು ತಮ್ಮ ದಾಸ್ತಾನನ್ನು ನಮ್ಮ ರಾಜ್ಯದಲ್ಲಿರುವ ಸರ್ಕಾರದ ಅಧೀನದ ಗೋದಾಮುಗಳಲ್ಲಿ ಸಂಗ್ರಹ ಮಾಡಬಹುದಾಗಿದೆ ಎಂದು ತಿಳಿಸಿದರು.
ಹೀಗೆ ದಾಸ್ತಾನು ಮಾಡಲಾದ ಸರಕಿಗೆ ಉಗ್ರಾಣಗಳಿಂದ ರಶೀದಿಗಳು ಲಭಿಸಲಿದ್ದು, ಇದರಿಂದ ಬ್ಯಾಂಕ್ ಗಳು ಸೇರಿದಂತೆ ಇತರ ಹಣಕಾಸಿನ ಸಂಸ್ಥೆಗಳಿಂದ ಸಾಲ ಸೌಲಭ್ಯಗಳು ಸಿಗಲಿವೆ. ಅಲ್ಲದೇ
ಕೃಷಿಕರಿಂದ ಶೇಖರಣ ಮಾಡಿದ ದಾಸ್ತಾನಿಗೆ ಸಂಗ್ರಹಣಾ ಶುಲ್ಕದಲ್ಲಿ ಶೇಕಡಾ 20 ರಷ್ಟು ಹಾಗೂ ಪರಿಶಿಷ್ಟ ಜಾತಿ ಪಂಗಡದವರಿಗೆ ಶೇಕಡಾ 25ರಷ್ಟು ರಿಯಾಯಿತಿ ಸಹ ದೊರೆಯಲಿದ್ದು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಾ ಬಂದಿದೆ. ಇದಲ್ಲದೆ ನಿಗಮದ ರಾಜ್ಯಾದ್ಯಂತ ಇರುವ ಉಗ್ರಾಣ ಕೇಂದ್ರಗಳಲ್ಲಿ ಗಣಕೀಕರಣ ವ್ಯವಸ್ಥೆ ಆಗಿದ್ದು, ಆನ್ ಲೈನ್ ವ್ಯವಸ್ಥೆ ಸಹ ಇರಲಿದೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ರೈತರಿಂದ ಭತ್ತ, ರಾಗಿ, ಬಿಳಿಜೋಳ, ತೊಗರಿ, ಕಡಲೆ, ಹೆಸರು, ಉದ್ದು ಸೇರಿದಂತೆ ಮೊದಲಾದ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸಲಾಗುತ್ತಿದ್ದು ಇವುಗಳನ್ನು ರಾಜ ಉಗ್ರಾಣಗಳ ಗೋದಾಮುಗಳಲ್ಲಿ ದಾಸ್ತಾನು ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ 1962ರ ಕಾಯಿದೆಯಂತೆ ಎಲ್ಲಾ ರಾಜ್ಯಗಳಲ್ಲೂ ರಾಜ್ಯ ಉಗ್ರಾಣ ನಿಗಮಗಳಿರುತ್ತವೆ. ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಯ ಅಧೀನ ಸಂಸ್ಥೆಯಾಗಿದೆ. ಕೇಂದ್ರ ಸರ್ಕಾರದ ಕೇಂದ್ರ ಉಗ್ರಾಣ ನಿಗಮ ಮತ್ತು ಕರ್ನಾಟಕ ರಾಜ್ಯ ಸರ್ಕಾರವು ಶೇ 50:50ರಷ್ಟು ಷೇರು ಬಂಡವಾಳವನ್ನಾಗಿ ಹೂಡಿರುತ್ತವೆ. ಕರ್ನಾಟಕದಲ್ಲಿ ಪ್ರಪ್ರಥಮಬಾರಿಗೆ 1958ರಲ್ಲಿ ರಾಯಚೂರು, ಹುಬ್ಬಳ್ಳಿ ಮತ್ತು ಮೈಸೂರುಗಳಲ್ಲಿ ನಿಗಮವು ತನ್ನ ರಾಜ್ಯ ಉಗ್ರಾಣಗಳ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಿತು. ರಾಜ್ಯಾದ್ಯಂತ ಇಂದು ನಿಗಮವು 17.50 ಲಕ್ಷ ಮೆ.ಟನ್ಗಳಷ್ಟು ಸಾಮರ್ಥ್ಯದ ಗೋದಾಮುಗಳೊಂದಿಗೆ 153 ರಾಜ್ಯ ಉಗ್ರಾಣ ಶಾಖೆಗಳನ್ನು ಮತ್ತು 1 ಪ್ರಾದೇಶಿಕ ಕಛೇರಿಗಳನ್ನು ಹೊಂದಿರುತ್ತದೆ. ನಿಗಮದಲ್ಲಿ ಒಟ್ಟು 280 ಖಾಯಂ ಅಧಿಕಾರಿ/ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ನೂತನವಾಗಿ ನಿರ್ಮಾಣ ಮಾಡಿರುವ ಈ ‘ಉಗ್ರಾಣ ಭವನ’ವು ನಿಗಮದ ಪ್ರಧಾನ ಆಡಳಿತ ಕಛೇರಿಯಾಗಿರುತ್ತದೆ.
ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸೇರಿದಂತೆ ಇತರ ಪ್ರಮುಖರು ಇದ್ದರು.