ಬೆಂಗಳೂರು, ಮಾ. 04: ಸದನದಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದ ಭದ್ರಾವತಿ ಶಾಸಕ ಸಂಗಮೇಶ್ ಅವರನ್ನು ಒಂದು ವಾರಗಳ ಕಾಲ ಅಮಾನತು ಮಾಡಲಾಗಿದೆ.
ವಿಧಾನಸೌಧದಲ್ಲಿ ಗುರುವಾರ ಆರಂಭಗೊಂಡ ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕರು ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದರು. ಈ ವೇಳೆ ಕೈನಾಯಕರ ಜೊತೆಗೆ ಪ್ರತಿಭಟನೆಗೆ ಮುಂದಾದ ಸಂಗಮೇಶ್, ಭದ್ರಾವತಿಯಲ್ಲಿ ತಮ್ಮ ಮೇಲೆ ಬೇಕು ಬೇಕೆಂದು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿ, ಶರ್ಟ್ ತೆಗೆದು ಹೆಗಲ ಮೇಲೆ ಹಾಕಿಕೊಂಡು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ನೀವು ಭದ್ರಾವತಿ ಜನಿರಿಗೆ ಅವಮಾನಿಸಿದ್ದೀರಿ. ನಿಮ್ಮ ಸ್ಥಾನ ಏನು ಗೊತ್ತಿದೆಯಾ ಎಂದು ಗರಂ ಆದರು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದ ಕಾಗೇರಿ ಅವರು ಸಂಗಮೇಶ್ ಅವರಿಗೆ ಬುದ್ದಿ ಹೇಳುವಂತಿ ತಿಳಿಸಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮಧ್ಯಪ್ರವೇಶಿಸಿ ಸಂಗಮೇಶ್ ಅವರ ಶರ್ಟ್ ಹಾಕಿಸಿದರು.
ಭದ್ರಾವತಿಯಲ್ಲಿ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯದಲ್ಲಿ ನಡೆದ ಘರ್ಷಣೆ ಹಿನ್ನೆಲೆ ಸಂಗಮೇಶ್ ಅವರ ಮೇಲೆ ಪ್ರಕರಣ ದಾಖಲಾಗಿತ್ತು.