ಬೆಂಗಳೂರು, ಡಿ. 08: ರೈತ ಪರ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಗೆ ಕಾಂಗ್ರೆಸ್ ಬೆಂಬಲ ನೀಡಿರುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗಾಗಿದ್ದು, ಕಾಂಗ್ರೆಸ್ ನವರು ಕಪ್ಪು ಬಟ್ಟೆಯನ್ನಾದರೂ ಧರಿಸಲು, ಬಿಳಿ ಬಟ್ಟೆಯನ್ನಾದರೂ ಧರಿಸಲಿ ಅವರಿಗೆ ಯಾರು ಕೇರ್ ಮಾಡುತ್ತಾರೆ ಎಂದು ಛೇಡಿಸಿದರು.
ರೈತ ವಿರೋಧಿಯಾದ ಯಾವುದೇ ಕ್ರಮಗಳನ್ನು ಪ್ರಧಾನಿ ನರೇಂದ್ರಮೋದಿ ಸರ್ಕಾರ ಕೈಗೊಂಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಪರವಾಗಿದೆ. ಇದರ ವಾಸ್ತವ ಸ್ಥಿತಿಯನ್ನು ರೈತರು ಅರ್ಥ ಮಾಡಿಕೊಳ್ಳಬೇಕು. ಅದು ಬಿಟ್ಟು ರಾಜಕೀಯ ಕಾರಣಕ್ಕಾಗಿ ಕರೆ ನೀಡಿರುವ ಬಂದ್ ಗೆ ಯಾರೂ ಬೆಂಬಲ ನೀಡಬಾರದು ಎಂದು ಯಡಿಯೂರಪ್ಪ ಮನವಿ ಮಾಡಿದರು.