ಗುಜರಾತ್, ಜೂ. 03: ಕಲುಷಿತ ನೀರು ಸೇವನೆ ಮಾಡಿ 6 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನ ಆಸ್ಪತ್ರೆ ಸೇರಿದ ಘಟನೆ ಗುಜರಾತ್ನ ಸೂರತ್ನಲ್ಲಿರುವ ಕಾಠೋರ್ ಗ್ರಾಮದಲ್ಲಿ ನಡೆದಿದೆ.
ಕುಡಿಯುವ ನೀರಿನ ಪೈಪ್ ಒಡೆದು ಹೋಗಿ, ಅದು ಒಳಚರಂಡಿ ನೀರಿನೊಂದಿಗೆ ಬೆರೆತು ಹೋಗಿದ್ದು, ಸ್ಥಳ ಪರೀಕ್ಷೆ ಸಮಯದಲ್ಲಿ ಗೊತ್ತಾಗಿದೆ. ಇದೇ ನೀರು ಕುಡಿದ ಜನರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಇನ್ನು ಸೂರತ್ ಮೇಯರ್ ಹೇಮಾಲಿ ವೋಘವಾಲಾ ಘಟನೆಯ ಬಗ್ಗೆ ಸಂಪೂರ್ಣ ವರದಿ ಪಡೆದಿದ್ದು, ಮೃತರ ಕುಟುಂಬಗಳಿಗೆ 1 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ. ಗ್ರಾಮದ ನೀರಿನ ವ್ಯವಸ್ಥೆ ಸರಿಯಾಗುವವರೆಗೂ ಟ್ಯಾಂಕರ್ ಮೂಲಕ ಶುದ್ಧ ನೀರು ಪೂರೈಕೆ ಮಾಡಲಾಗುವುದು. ಹಾಗೇ, ಹಳ್ಳಿಗಳಲ್ಲಿ ನೀರಿನ ಪರೀಕ್ಷೆ ಮಾಡಿಸಲು ವಾಹನವನ್ನು ಕಳಿಸಲಾಗುವುದು ಎಂದೂ ಹೇಳಿದ್ದಾರೆ.