ಬೆಳಗಾವಿ ಡಿ 23 : ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಮತಾಂತರ ನಿಷೇಧ ಮಸೂದೆಯು ವಿಧಾನಸಭೆಲ್ಲಿ ಧ್ವನಿಮತದ ಮೂಲಕ ಅಂಗೀಕಾರವಾಗಿದೆ.
ನಿನ್ನೆ ವಿಧಾನಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಮಂಡಿಸಿದ್ದರು. ಈ ಬಗ್ಗೆ ಇಂದು ಕಲಾಪದಲ್ಲಿ ಸುದೀರ್ಘ ಚರ್ಚೆ ನಡೆಯಿತು. ಈ ಬಗ್ಗೆ ಮಾತನಾಡಿದ ಅರಗ ಜ್ಞಾನೇಂದ್ರ ಮತಾಂತರ ನಿಷೇಧ ವಿಧೇಯಕ ತಂದಿರುವುದು ಯಾವುದೇ ಧರ್ಮದ ವಿರುದ್ಧವಲ್ಲ ಅಥವಾ ಯಾವುದೇ ಧರ್ಮದ ಹಕ್ಕನ್ನು ಮೊಟಕುಗೊಳಿಸಲು ಅಲ್ಲ. ಈಗಾಗಲೇ ಎಂಟು ರಾಜ್ಯಗಳು ಈ ವಿಧೇಯಕ ತಂದಿವೆ. ಕರ್ನಾಟಕ ಒಂಭತ್ತನೇ ರಾಜ್ಯವಾಗಲಿದೆ. ಇತ್ತೀಚೆಗೆ ಮತಾಂತರ ದೊಡ್ಡ ಪಿಡುಗಾಗಿದ್ದು, ಇದೇ ಸದನದಲ್ಲಿ ಶಾಸಕರ ತಾಯಿಯೊಬ್ಬರು ಮತಾಂತರ ಆಗಿದ್ದನ್ನು ನೋಡಿದ್ದೇವೆ ಎಂದರು
ಬಲವಂತದ ಮತಾಂತರ ಮಾಡಿದರೆ ಮೂರರಿಂದ ಐದು ವರ್ಷ ಜೈಲು ಶಿಕ್ಷೆ, 25,000 ರೂ. ದಂಡ, ಅಪ್ರಾಪ್ತರು- ಅನೂಸೂಚಿತ ಜಾತಿ ಪಂಗಡಕ್ಕೆ ಸೇರಿದ ಪ್ರಕರಣವಾದರೆ 3 ರಿಂದ 10 ವರ್ಷ ಜುಲ್ಮಾನೆ, 50 ಸಾವಿರ ರೂ. ದಂಡ, ಸಾಮೂಹಿಕ ಮತಾಂತರ ಉಲ್ಲಂಘನೆ 3ರಿಂದ 10 ವರ್ಷ ಜುಲ್ಮಾನೆ 1 ಲಕ್ಷ ರೂ. ದಂಡ, ಮತಾಂತರದಿಂದ ಬಲಿಯಾದರೆ ಆಪಾದಿತರಿಂದ 5 ಲಕ್ಷ ಮತ್ತು ನ್ಯಾಯಲಯದ ಶಿಕ್ಷೆಗೆ ಒಳಪಡಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
”ಬಲವಂತದ, ಮತಾಂತರದ ಉದ್ದೇಶದಿಂದ ಮದುವೆಯಾದರೆ ಅದು ಅಸಿಂಧುವಾಗುತ್ತದೆ ಮತ್ತು ಜಾಮೀನು ರಹಿತ ಪ್ರಕರಣವಾಗಿರುತ್ತದೆ. ಮೂಲ ಮತದ ಎಲ್ಲ ಸೌಲಭ್ಯಗಳನ್ನು ವ್ಯಕ್ತಿ ಕಳೆದುಕೊಳ್ಳುತ್ತಾನೆ. ಮತಾಂತರದ ವ್ಯಕ್ತಿಯನ್ನು ಪುನರ್ವರ್ಗೀಕರಿಸಿ ದಾಖಲಾತಿಯಲ್ಲಿ ಬರೆಯಲಾಗುತ್ತದೆ. ಮತಾಂತರ ತಡೆಯುತ್ತಿಲ್ಲ. ಎಲ್ಲರನ್ನು ಒಪ್ಪಿಕೊಂಡು ಅಪ್ಪಿಕೊಂಡು ಬದುಕುತ್ತಿದ್ದೇವೆ. ಶ್ರೇಷ್ಠ ಸಂಸ್ಕೃತಿ ಒಡೆಯಬಾರದು,” ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು
ಮದುವೆ ಅಸಿಂಧು: ಒಂದು ಧರ್ಮದ ಪುರುಷ ಮತ್ತೊಂದು ಧರ್ಮದ ಮಹಿಳೆಯೊಂದಿಗೆ ಮದುವೆಗೆ ಮುಂಚೆ ಅಥವಾ ನಂತರ ಆತನೆ, ಆಕೆಯೇ ಮತಾಂತರಗೊಳ್ಳುವ ಮೂಲಕ ಕಾನೂನು ಬಾಹಿರ ಮತಾಂತರ ಅಥವಾ ವಿಪರ್ಯಯದ ಏಕಮಾತ್ರ ಉದ್ದೇಶಕ್ಕಾಗಿ ಮಾಡಿದ ಮದುವೆ ಅಸಿಂಧು ಎಂದು ಘೋಷಿಸುವುದು.
ಉದ್ದೇಶ: ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಖಾತ್ರಿಗೊಳಿಸಲಾಗಿದೆ. ಯಾವುದೇ ವ್ಯಕ್ತಿ ತಮ್ಮ ಆಯ್ಕೆಯ ಯಾವುದೇ ಧರ್ಮವನ್ನು ಅಂಗೀಕರಿಸಲು, ಆಚರಿಸಲು ಮತ್ತು ಪ್ರಸಾರ ಮಾಡಲು ಮುಕ್ತ ರಾಜ್ಯದಲ್ಲಿ ಆಮಿಷ, ಒತ್ತಾಯ, ಬಲವಂತದ ಮತಾಂತರ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿವೆ. ಹೀಗಾಗಿ ಇಂತಹ ಘಟನೆಗಳನ್ನು ತಡೆಗಟ್ಟಲು ಮತ್ತು ಇಂತ ಕೃತ್ಯಗಳಲ್ಲಿ ತೊಡಗಿರುವ ವ್ಯಕ್ತಿಗಳನ್ನು ಶಿಕ್ಷಿಸಲು ಅವಕಾಶ ಕಲ್ಪಿಸಲು ಈ ವಿಧೇಯಕವನ್ನು ತರಲಾಗಿದೆ ಎಂದು ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.
ಮಸೂದೆಯ ನಿಯಮಗಳು :
- ಆಮಿಷ, ಪ್ರಲೋಚನೆ, ಉದ್ಯೋಗ ಉಚಿತ ಶಿಕ್ಷಣ, ನಗದು, ಮದುವೆಯಾಗುವುದಾಗಿ ವಾಗ್ದಾನ, ಉತ್ತಮ ಜೀವನ ಶೈಲಿಯ ಭರವಸೆ, ದೈವಿಕ ಅಸಂತೋಷ, ಒತ್ತಾಯ, ವಂಚನೆ ಮೂಲಕ ಮತಾಂತರ ಮಾಡುವುದಕ್ಕೆ ನಿಷೇಧವಿದೆ. ಒಂದು ಧರ್ಮದ ಆಚರಣೆಗಳ ಅವಹೇಳನ ಮಾಡುವುದನ್ನೂ ಆಮಿಷ ಎಂದೇ ಪರಿಗಣಿಸಲಾಗಿದೆ.
- ವ್ಯಕ್ತಿಯೊಬ್ಬ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರವಾದಾಗ ಮಾತ್ರ ಈ ಕಾಯ್ದೆ ಅನ್ವಯವಾಗುತ್ತ ಮತಾಂತರಗೊಂಡು ವಾಪಸ್ ಮಾತೃಧರ್ಮಕ್ಕೆ ಆಗಮಿಸುವುದಾದರೆ ಈ ಕಾಯ್ದೆ ಅನ್ವಯವಾಗುವುದಿಲ್ಲ
- ಯಾರೇ ಮತಾಂತರಗೊಂಡ ವ್ಯಕ್ತಿ ಆತನ ಪಾಲಕರು, ಸೋದರ, ಸೋದರಿ, ಆತನಿಗೆ ಸೋದರ ಸಂಬಂಧಿ, ಮದುವೆ ಅಥವಾ ದತ್ತು ಸಂಬಂಧಿ, ಸಹವರ್ತಿ, ಸಹೋದ್ಯೋಗಿ ಮತಾಂತರ ಸಂಬಂಧ ದೂರು ಕೊಡಬಹುದು.
- ಬಲವಂತದ ಮತಾಂತರ ಮಾಡಿದರೆ ಅಂಥ ವ್ಯಕ್ತಿಗೆ ಮೂರು ವರ್ಷದಿಂದ ಐದು ವರ್ಷಗಳ ವರೆಗೆ ವಿಸ್ತರಿಸಬಹುದಾದ ಕಾರಾವಾಸ, 25 ಸಾವಿರ ರೂ.ಗಳ ವರೆಗೆ ದಂಡ ವಿಧಿಸಲಾಗುತ್ತದೆ. ಹಾಗೆಯೇ ಅಪ್ರಾಪ್ತ ಅಥವಾ ಅಸ್ವಸ್ಥಚಿತ್ತ ವ್ಯಕ್ತಿ ಮಹಿಳಾ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ವ್ಯಕ್ತಿಗಳನ್ನು ಮತಾಂತರ ಮಾಡಿದರೆ ಮೂರರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ, 50 ಸಾವಿರ ರೂ.ಗಳವರೆಗೆ ದಂಡ ವಿಧಿಸಲಾಗುವುದು
- ಸಾಮೂಹಿಕವಾಗಿ ಮತಾಂತರ ಮಾಡಿದರೆ ಅಂಥವರಿಗೆ ಮೂರು ವರ್ಷದಿಂದ 10 ವರ್ಷಗಳವರೆಗೆ ಕಾರಾಗೃಹ ವಾಸ, ಒಂದು ಲಕ್ಷ ರೂ.ಗಳವರೆಗೆ ಶಿಕ್ಷೆ
- ಒಂದು ವೇಳೆ ಆಮಿಷಕ್ಕೆ ಬಲಿಯಾಗಿ ಮತಾಂತರವಾದರೆ ಇಂಥ ಸಂತ್ರಸ್ತರಿಗೆ ಮತಾಂತರ ಮಾಡಿದ ವ್ಯಕ್ತಿ 5 ಲಕ್ಷ ರೂ.ಗಳವರೆಗೆ ಪರಿಹಾರ ನೀಡುವಂತೆ ಕೋರ್ಟ್ ಆದೇಶ ನೀಡಬಹುದು.
- ಈ ಕಾಯ್ದೆಯ ಪ್ರಕಾರ, ಹಿಂದೊಮ್ಮೆ ಬಲವಂತದ ಮತಾಂತರ ಮಾಡಿ, ಅಪರಾಧಿ ಎಂದು ಸಾಬೀತಾದ ವ್ಯಕ್ತಿ ಜೈಲು ಶಿಕ್ಷೆ ಮುಗಿಸಿ ಹೊರಬಂದು ಮತ್ತೆ ಅದೇ ತಪ್ಪನ್ನು ಮಾಡಿದರೆ ಆತನಿಗೆ ಐದು ವರ್ಷಕ್ಕಿಂತ ಹೆಚ್ಚಿನ ಕಾರಾಗೃಹ ವಾಸ ಮತ್ತು 2 ಲಕ್ಷ ರೂ.ಗಳ ವರೆಗೆ ದಂಡ ವಿಧಿಸಬಹುದು. ಅಲ್ಲದೆ ಈ ಬಲವಂತದ ಮತಾಂತರಕ್ಕೆ ಸಂಬಂಧಿಸಿದ ಅಪರಾಧವು ಜಾಮೀನುರಹಿತವಾಗಿರುತ್ತದೆ.
- ಸ್ವಇಚ್ಛೆಯಿಂದ ಮತಾಂತರವಾಗುವುದಾದರೆ ಮೊದಲು ಘೋಷಿಸಿಕೊಳ್ಳಬೇಕು. ಅಂದರೆ ಕನಿಷ್ಠ 30 ದಿನಗಳ ಮುಂಚಿತವಾಗಿ ತನ್ನ ನಿವಾಸದ ಜಿಲ್ಲೆಯ ಅಥವಾ ಜನ್ಮಸ್ಥಳದ ದಂಡಾಧಿಕಾರಿ ಅಥವಾ ಜಿಲ್ಲಾ ಅಪರ ದಂಡಾಧಿಕಾರಿಗೆ ಮಾಹಿತಿ ನೀಡಬೇಕು. ಧಾರ್ಮಿಕ ಮತಾಂತರ ಮಾಡುವ ವ್ಯಕ್ತಿಯೂ ತನ್ನ ಜಿಲ್ಲೆಯ ಸದರಿ ಅಧಿಕಾರಿಗಳಿಗೆ 30 ದಿನಗಳ ಮುಂಗಡ ನೋಟಿಸ್ ನೀಡಬೇಕು. ಈ ಮನವಿಗಳು ಬಂದ ಬಳಿಕ ಅಧಿಕಾರಿಯು ಸೂಚನಾ ಫಲಕದಲ್ಲಿ ಆಕ್ಷೇಪಣೆಗಳನ್ನು ಆಹ್ವಾನಿಸಿ ನೋಟಿಸ್ ಅಂಟಿಸಬೇಕು. ಒಂದು ವೇಳೆ ಇದಕ್ಕೆ ಆಕ್ಷೇಪಣೆ ಬಂದಲ್ಲಿ ಮತಾಂತರದ ನೈಜ ಆಶಯ, ಉದ್ದೇಶ ಮತ್ತು ಕಾರಣದ ಬಗ್ಗೆ ಕಂದಾಯ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಮೂಲಕ ವಿಚಾರಣೆ ನಡೆಸಬೇಕು. ಒಂದು ವೇಳೆ ಸ್ವಇಚ್ಛೆಯಿಂದ ಮತಾಂತರವಾಗುತ್ತಿಲ್ಲ, ಆಮಿಷ ಅಥವಾ ಒತ್ತಡಗಳಿಗೆ ಮತಾಂತರ ಮಾಡಲಾಗುತ್ತಿದೆ ಎಂಬುದು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಕಿಮಿನಲ್ ದೂರು ದಾಖಲಿಸಬಹುದು.