ಬೆಂಗಳೂರು, ಆ. 02: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೋನಾ ಹೆಮ್ಮಾರಿ ಕಾಟ ಹೆಚ್ಚಾಗುತ್ತಿದೆ. ಹೀಗಾಗಿ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಾಗಿರುವ ಹಿನ್ನೆಲೆ, ಕರ್ನಾಟಕಕ್ಕೂ ಆತಂಕ ಎದುರಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮಾತನಾಡಿ, ಕೇರಳ ಹಾಗೂ ಮಹಾರಾಷ್ಟ್ರದಿಂದ ಬಂದವರಿಗೆ ಆರ್ ಟಿ ಪಿಸಿ ಆರ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಟೆಸ್ಟ್ ಇಲ್ಲದೇ ಬರುವವರು ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇರಲೇಬೇಕು. ಸಾಂಸ್ಥಿಕ ಕ್ವಾರಂಟೈನ್ಗೆ ಕೇರಳ ಪ್ರಯಾಣಿಕರನ್ನು ಇಡಲು ಶಿಫಾರಸ್ಸು ಮಾಡಿದೆ ಎಂದು ಹೇಳಿದರು.
ಈ ಬಗ್ಗೆ ಬಿಬಿಎಂಪಿ, ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ಮಾಡಲಿವೆ. ವಲಯ ಮಟ್ಟದ ಅಧಿಕಾರಿಗಳು ಸಾಂಸ್ಥಿಕ ಕ್ವಾರಂಟೈನ್ಗೆ ಸೂಚನೆ ನೀಡಿದ್ದಾರೆ. ಇಂದಿನಿಂದ ಕೇರಳ ಹಾಗೂ ಮಹಾರಾಷ್ಟ್ರದಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. ಆರ್ ಟಿಪಿಸಿಆರ್ ಟೆಸ್ಟ್ 24 ಗಂಟೆಯೊಳಗೆ ನೀಡಲು ಸೂಚನೆ ನೀಡಲಾಗಿದೆ ಎಂದರು.
ಬೆಂಗಳೂರಿನಲ್ಲಿ ಮತ್ತೆ ಹೆಮ್ಮಾರಿ ಕಾಟ ಶುರುವಾಗಿದ್ದು, ವೀಕೆಂಡ್ ಲಾಕ್ ಬಗ್ಗೆ ಪಾಲಿಕೆ ಪ್ರಸ್ತಾಪ ಮಾಡಿದೆ. ಸಾಮಾನ್ಯ ಜನ ಜೀವನ ನಡೆಸಬೇಕಾಗಿದೆ. ಸೋಂಕಿಗೆ ಪೂರ್ವ ಸಿದ್ಧತೆ ಆಗಬೇಕಾಗಿದೆ. ಸರ್ಕಾರದ ಹಂತದಲ್ಲಿ ಅಂತಿಮ ತೀರ್ಮಾನ ಆಗಲಿದೆ. 500 ಕ್ಕಿಂತ ಕೇಸ್ ಸಂಖ್ಯೆ ಕಡಿಮೆ ಇದೆ. ಕಂಟೈನ್ಮೆಂಟ್ ಝೋನ್ ವಿಚಾರದಲ್ಲಿ ಕಠಿಣ ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ಇದೇ ವೇಳೆ, ವೀಕೆಂಡ್ ಲಾಕ್ಡೌನ್ ಬಗ್ಗೆ ಬಿಬಿಎಂಪಿ ಕಮಿಷನರ್ ಸುಳಿವು ನೀಡಿದರು. ಬೆಂಗಳೂರಿನಲ್ಲಿ ಕೋವಿಡ್ ವ್ಯಾಕ್ಸಿನ್ಗೆ ಹಾಹಾಕಾರ ಶುರುವಾಗಿ ಎಂಬ ವಿಚಾರಕ್ಕೆ ಬಿಬಿಎಂಪಿ ಕಮಿಷನರ್ ಅಸಮಾಧಾನ ವ್ಯಕ್ತಪಡಿಸಿದರು. ಬೇಡಿಕೆಗೆ ತಕ್ಕಂತೆ ವ್ಯಾಕ್ಸಿನ್ ಬಂದಿಲ್ಲ. ಜುಲೈನಲ್ಲಿ ಪೂರ್ಣ ಬೇಡಿಕೆಯಂತೆ ವ್ಯಾಕ್ಸಿನ್ ಸಿಕ್ಕಿಲ್ಲ. ಶೇ.17 ರಷ್ಟು ಜನರು ವ್ಯಾಕ್ಸಿನ್ ಪಡೆದಿದ್ದಾರೆ. ಪಾಲಿಕೆಗೆ ನಿತ್ಯ ಒಂದೂವರೆ ಲಕ್ಷ ವ್ಯಾಕ್ಸಿನ್ ಬೇಕಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆಗೆ ಬೇಡಿಕೆ ಇಡಲಾಗಿದೆ ಎಂದರು.
ಮುಂದುವರೆದ ಅವರು, ಈಗಲೂ ಎರಡನೆ ಅಲೆ ಮುಗಿದಿಲ್ಲ ಅಂತಾರೆ. ಮತ್ತೆ ಕೆಲವರು ಮೂರನೆ ಅಲೆ ಆರಂಭ ಅಂತಾರೆ. ಹೀಗಾಗಿ ತಜ್ಞರೇ ಅಲೆ ಬಗ್ಗೆ ಅಂತಿಮ ನಿರ್ಧಾರ ಮಾಡಲಿದ್ದಾರೆ ಎಂದು ಹೇಳಿದರು.ವ್ಯಾಕ್ಸಿನ್ ಪಡೆದವರಿಗೆ ರಿಸ್ಕ್ ಕಡಿಮೆ ಇದೆ. 45 ವರ್ಷ ಮೇಲ್ಪಟ್ಟ ವಯೋಮಾನದವರು ಅತಿ ಹೆಚ್ಚು ವ್ಯಾಕ್ಸಿನ್ ಪಡೆದಿದ್ದಾರೆ. ಎಲ್ಲರಿಗೂ ವ್ಯಾಕ್ಸಿನ್ ಕೊಡಲು ಮತ್ತಷ್ಟು ಬೇಡಿಕೆ ಇದೆ ಎಂದರು.
ಇನ್ನು, ಮೂರನೆ ಅಲೆಗೆ ಬಿಬಿಎಂಪಿ ಸಕಲ ಸಿದ್ಧತೆ ಮಾಡಿಕೊಂಡಿರುವ ವಿಚಾರಕ್ಕೆ, ಸದ್ಯ ಎರಡನೆ ಅಲೆಯ ವ್ಯವಸ್ಥೆ ಹಾಗೇ ಉಳಿದಿದೆ. ಇನ್ನು ಮುಂದೆ ಫಿಜಿಕಲ್ ಟ್ರಯಾಜ್ ಕಡ್ಡಾಯವಾಗಿ ಮಾಡಲಾಗುತ್ತದೆ. 400 ರಷ್ಟು ಬೆಡ್ ಮಾತ್ರ ಸರ್ಕಾರಿ ಕೋಟಾದಲ್ಲಿ ಕೋವಿಡ್ ರೋಗಿಗಳು ಇದ್ದಾರೆ. ಎಲ್ಲಾ ದೊಡ್ಡ ಆಸ್ಪತ್ರೆಗಳಲ್ಲೂ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲಾಗಿದೆ. ಖಾಸಗಿ, ಸರ್ಕಾರಿ ಎಲ್ಲ ಕಡೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.