ಕೊಲಂಬೊ: ಟೀಂ ಇಂಡಿಯಾದ ಬೌಲಿಂಗ್ ಆಲ್ರೌಂಡರ್ ಕೃನಾಲ್ ಪಾಂಡ್ಯಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವೆ ಇಂದು ನಡೆಯಬೇಕಿದ್ದ ಎರಡನೇ ಟಿ20 ಪಂದ್ಯವನ್ನ ಮುಂದೂಡಲಾಗಿದೆ.
ಭಾರತ ಹಾಗೂ ಶ್ರೀಲಂಕಾ ನಡುವೆ ಮಂಗಳವಾರ ರಾತ್ರಿ ಎರಡನೇ ಟಿ20 ಪಂದ್ಯ ನಡೆಯಬೇಕಿತ್ತು. ಆದರೆ ಕೃನಾಲ್ ಪಾಂಡ್ಯಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಇಂದಿನ ಪಂದ್ಯವನ್ನು ಜು.28(ಬುಧವಾರ)ಕ್ಕೆ ಮುಂದೂಡಲಾಗಿದೆ. ಅಲ್ಲದೇ ಉಭಯ ತಂಡಗಳ ಆಟಗಾರರನ್ನ ಐಸೋಲೇಷನ್ ನಲ್ಲಿ ಇರಿಸಲಾಗಿದ್ದು, ಕೃನಾಲ್ ಪಾಂಡ್ಯ ಜೊತೆ ಸಂಪರ್ಕದಲ್ಲಿದ್ದ ಆಟಗಾರರ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ.
ಕೃನಾಲ್ ಪಾಂಡ್ಯಗೆ ಕೋವಿಡ್ ಪಾಸಿಟಿವ್ ಬಂದಿರುವ ಪರಿಣಾಮ ಸೂರ್ಯಕುಮಾರ್ ಯಾದವ್ ಹಾಗೂ ಪೃಥ್ವಿ ಶಾ ಅವರ ಇಂಗ್ಲೆಂಡ್ ಪ್ರವಾಸದ ಮೇಲೂ ಪರಿಣಾಮ ಬೀರಿದ್ದು, ಈ ಇಬ್ಬರು ಆಟಗಾರರನ್ನು ಸಹ ಶ್ರೀಲಂಕಾದಲ್ಲಿ ಐಸೋಲೇಟ್ ಮಾಡಲಾಗಿದೆ.