ಮೈಸೂರು, ಮಾ. 18: ಕೋವಿಡ್ 2ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಕೇರಳ ಬಾರ್ಡರ್ ನಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಕೇರಳದಿಂದ ಬರುವ ಪ್ರವಾಸಿಗರಿಗೆ ಕೊರೊನಾ ಟೆಸ್ಟ್ ಕಡ್ಡಾಯವಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಗಡಿಭಾಗದ ಚೆಕ್ ಪೋಸ್ಟ್ಗಳಲ್ಲಿ ಎಲ್ಲಾ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಕೇರಳದಿಂದ ಬರುವ ಪ್ರವಾಸಿಗರಿಗೆ ಕೊರೊನಾ ಟೆಸ್ಟ್ ಕಡ್ಡಾಯವಾಗಿದ್ದು, ಒಂದು ವೇಳೆ ಟೆಸ್ಟ್ ಮಾಡಿಸದೆ ಬಂದ ಪ್ರಯಾಣಿಕರಿಗೆ, ಸ್ಥಳದಲ್ಲೇ ರ್ಯಾಪಿಡ್ ಟೆಸ್ಟ್ ಮಾಡಲಾಗುತ್ತದೆ. ಕೊರೊನಾ ತಡೆಗೆ ಕ್ರಮ ಕುರಿತು ವಯನಾಡ್ ಎಸ್.ಪಿ ಅರವಿಂದ್ ಜೊತೆ ಮಾತನಾಡಿ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಗೆ ಹೆಚ್ಚು ಆದ್ಯತೆ ನೀಡುವಂತೆ ಹೇಳಿದ್ದೇವೆ ಎಂದು ತಿಳಿಸಿದರು.
ಉಳಿದಂತೆ ಚಾಮರಾಜನಗರ, ಹಾಸನ ಕೊಡಗು, ಮಂಡ್ಯ ಮತ್ತು ಬೆಂಗಳೂರಿನಿಂದ ಬರುವವರಿಗೆ ಯಾವುದೇ ನಿರ್ಬಂಧ ಸದ್ಯಕ್ಕಿಲ್ಲ. ಮೈಸೂರಿಗೆ ಮಹಾರಾಷ್ಟ್ರದಿಂದ ಬರುವ ಪ್ರವಾಸಿಗರ ಸಂಖ್ಯೆ ಕಮ್ಮಿ, ಆಯಾ ಭಾಗಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದರು.