ಭಾರತೀಯ ಚಿತ್ರರಂಗದಲ್ಲಿ(Indian Film Industry) ಭಾರಿ ನಿರೀಕ್ಷೆ, ಕುತೂಹಲ ಹುಟ್ಟುಹಾಕಿದ್ದ ಸಿನಿಮಾ(Cinema) ಅಂದ್ರೆ ಅದು ಅಭಿನಯ ಚಕ್ರವರ್ತಿ, ಬಾದ್ಷಾ ಕಿಚ್ಚ ಸುದೀಪ್(Kiccha Sudeep) ಅಭಿನಯದ ವಿಕ್ರಾಂತ್ ರೋಣ(Vikrant Rona) ಸಿನಿಮಾ.

ಸಿನಿಪ್ರೇಕ್ಷಕರು ಸೇರಿದಂತೆ ಕಿಚ್ಚ ಸುದೀಪ್ ಅವರ ಅಭಿಮಾನಿಗಳಲ್ಲಿ ಸೃಷ್ಟಿಯಾಗಿದ್ದ ಕುತೂಹಲ, ಕಾತುರಕ್ಕೆ ಸದ್ಯ ತೆರೆ ಎಳೆದಾಗಿದೆ.
ಹೌದು, ಇದೇ ಜುಲೈ 28 ರಂದು ದೇಶಾದ್ಯಂತ ಬಿಡುಗಡೆಗೊಂಡ ವಿಕ್ರಾಂತ್ ರೋಣ ಸಿನಿಮಾವನ್ನು ವೀಕ್ಷಿಸಿದ ಪ್ರೇಕ್ಷಕರು, ತಮ್ಮ ಅಭಿಪ್ರಾಯ, ಅನಿಸಿಕೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಭರ್ಜರಿಯಾಗಿ ತೆರೆಕಂಡ ವಿಕ್ರಾಂತ್ ರೋಣದಲ್ಲಿ ಕಿಚ್ಚ ಸುದೀಪ್ ಅವರು ಫ್ಯಾಂಟಮ್, ಪೊಲೀಸ್ ಅಥವಾ `ವಿಲನ್’ ಆಗಿ ಕಾಣಿಸಿಕೊಂಡಿದ್ದಾರಾ? ಎಂಬ ಪ್ರಶ್ನೆ ಒಂದೆಡೆಯಾದ್ರೆ, ನಾಯಕಿಯೇ ಕಥೆಯೇ ಆಧಾರವಾ? ಇದು ರಂಗಿತರಂಗ ಅಧ್ಯಾಯವಾ? ಎಂಬ ಪ್ರಶ್ನೆ ಮತ್ತೊಂದೆಡೆ.
ಅನೂಪ್ ಭಂಡಾರಿ ನಿರ್ದೇಶನದಲ್ಲಿ ಕಮರೊಟ್ಟು ಏನು ಹೇಳಲಿದೆ? ನಾಯಕಿ ಜಾಕಲ್ವಿನ್ ಪಾತ್ರ ಏನು ಎಂಬ ಸಿನಿಪ್ರೇಕ್ಷಕರ(Cinema Audience) ಅನೇಕ ಕುತೂಹಲಕಾರಿ ಪ್ರಶ್ನಾವಳಿಗೆ ಇಂದಿನ ನನ್ನ ವಿಮರ್ಶೆ(Critic) ಉತ್ತರ ಕೊಡಲಿದೆ. ಹಾಗಾದ್ರೇ ತಡ ಯಾಕೆ? ಚಾಲನೆ ನೀಡಿ ನಿಮ್ಮ ಓದುವ ಕೌತುಕಕ್ಕೆ……
ಪ್ರತಿಬಾರಿ ನಮ್ಮ ಕನ್ನಡ ಸಿನಿಮಾ ವೀಕ್ಷಿಸಲು ಚಿತ್ರಮಂದಿರಕ್ಕೆ ಹೋದಾಗ, ಸಿನಿಪ್ರೇಕ್ಷಕರು ತಮ್ಮ ಆಸನದಲ್ಲಿ ಕುಳಿತು ಚಿತ್ರ ಪ್ರಾರಂಭವಾಗುವ ಮುನ್ನ ಒಂದೊಂದು ರೀತಿ ಜೈಕಾರ, ಶಿಳ್ಳೆ, ಚೀರಾಟಗಳಿಂದ ನೆರೆದಿರುವ ಇನ್ನಿತರ ಸಿನಿಪ್ರೇಕ್ಷಕರನ್ನು ಹುರಿದುಂಬಿಸುತ್ತಾರೆ. ಅದೇ ರೀತಿ ಈ ಬಾರಿಯೂ ನಡೆಯಿತು.
ಆದ್ರೆ, ಈ ಬಾರಿ ಕಳೆದ ಬಾರಿಯಂತೇ ಸ್ಟಾರ್ ನಟರ ಹೆಸರು ಬಳಸಿಲ್ಲ! ಬದಲಾಗಿ ಕೆಲ ದಿನಗಳಿಂದ ಇಂಟರ್ನೆಟ್ ಸ್ಟಾರ್(Internet Star) ಆಗಿ ಮಿಂಚುತ್ತಿರುವ ಚಿಕ್ಕಮಗಳೂರಿನ(Chikkamagalur) ಕಾಪಿನಾಡು ಚಂದುಗೆ ಸಿನಿಪ್ರೇಕ್ಷಕರ ಗುಂಪೊಂದು ಜೈಕಾರ ಹಾಕಿತು.
ಹೌದು, ವಿಕ್ರಾಂತ್ ರೋಣ ಪ್ರಾರಂಭಕ್ಕೂ ಮುನ್ನ `ಕಾಪಿನಾಡು ಚಂದು ಅಣ್ಣಂಗೆ’ ಜೈ ಎಂದು ಕೂಗಿದ್ದಾರೆ. ಈ ಮೂಲಕ ಹಾಸ್ಯ ಮಾಡುತ್ತ ಕೈಗೆ ಕೊಟ್ಟ 3ಡಿ ಗ್ಲಾಸ್(3D Glass) ಧರಿಸಿ ಪರದೆಯ ಮೇಲೆ ಕಣ್ಣಾಡಿಸುವತ್ತ ಸಾಗಿದರು.
3ಡಿ ಗ್ಲಾಸ್ ಅನುಭವದಲ್ಲಿ ವಿಕ್ರಾಂತ್ ರೋಣ ಕಂಡಿದ್ದು, ಒಂದು ರೀತಿಯ ವಿಶೇಷ ಅನುಭವವಾದ್ರೆ, ಪ್ರಾರಂಭದಲ್ಲಿ ಎಂಟ್ರಿ ಕೊಡುವ ನಟಿ ಮಿಲನಾ ನಾಗರಾಜ್(Milana Nagaraj) ಪಾತ್ರ ಅಷ್ಟೇ ಗೊಂದಲಮಯವಾಗಿದೆ. ಅಷ್ಟಕ್ಕೂ ಮಿಲನಾ ಪಾತ್ರವೇನು? ಎಂಬ ಪ್ರಶ್ನೆಗೆ ಕೊನೆಯಲ್ಲಿ ಉತ್ತರ ಸಿಗಲಿದೆ. ಈ ಸಿನಿಮಾದ ಕಥೆ ರಂಗಿತರಂಗ(Rangitaranga) ಅಲೆಯಲ್ಲೇ ಇದೆ ಎಂಬುದು ಸುಲಭವಾಗಿ ತಿಳಿಯುತ್ತದೆ.
ಆ ಊರಿನಲ್ಲಿ ಸರಣಿ ಕೊಲೆಗಳು ನಡೆಯುತ್ತಿವೆ ಆದ್ರೆ, ಅದು ನಿಗೂಢತೆಯಿಂದಲೇ ಕೂಡಿದೆ. ಈ ಸರಣಿ ಕೊಲೆಗಳ ಹಿಂದಿರುವ ಕಾಣದ ಕೈಗಳನ್ನು ಪತ್ತೆಹಚ್ಚಲು ಬರುವುದೇ ವಿಕ್ರಾಂತ್ ರೋಣ(ಕಿಚ್ಚ ಸುದೀಪ್). ಈ ಸಿನಿಮಾವನ್ನು ಫ್ಯಾಂಟಮ್ ರೀತಿಯಲ್ಲಿ ತೋರಿಸುವ ಪ್ರಯತ್ನ ಎಷ್ಟು ಚೆನ್ನಾಗಿದೆಯೋ, ಕಥೆಯ ಹಲವು ಕೋನವನ್ನು ಪ್ರೇಕ್ಷಕರಿಗೆ ಅದ್ಭುತವಾಗಿ ಪರಿಚಯಿಸಿರುವುದು ಅಷ್ಟೇ ಚೆನ್ನಾಗಿದೆ.
ಸಿನಿಮಾದಲ್ಲಿ ಮೂಡಿಬಂದಿರುವ ವಿಎಫ್ಎಕ್ಸ್(VFX) ಕೆಲಸಗಳು ಚಿತ್ರಕ್ಕೆ ಸಾಕಷ್ಟು ಬಲತುಂಬಿದೆ. ತಂತ್ರಜ್ಞಾನ ಕೆಲಸಗಳು ಪರದೆಯ ಮೇಲೆ ಅಚ್ಚುಕಟ್ಟಾಗಿ ಮೂಡಿಬಂದಿರುವುದು ಸಿನಿಮಾಗೆ ಪ್ಲಸ್ ಪಾಯಿಂಟ್.
ಇನ್ನು ಅನೂಪ್ ಭಂಡಾರಿ(Anup Bhandari) ಎಣೆದಿರುವ ಕಥೆ ಪ್ರೇಕ್ಷಕರಿಗೆ ಮೊದಲಾರ್ಧದಲ್ಲಿ ಸುಲಭವಾಗಿ ಅರ್ಥವಾಗುವುದಿಲ್ಲ ಎಂಬುದು ಗಮನಾರ್ಹ! ಸಿನಿಮಾಟೋಗ್ರಾಫಿ(Cinematography) ಹಾಗೂ ಸಂಕಲನಕಾರರ(Editors) ಕೈಚಳಕ ಚಿತ್ರಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
ಅಜನೀಶ್ ಲೋಕನಾಥ್(Ajaneesh Loknath) ನೀಡಿರುವ ಹಿನ್ನೆಲೆ ಸಂಗೀತ ಕಥೆಯನ್ನು ಸರಾಗವಾಗಿ ಪ್ರೇಕ್ಷಕನಿಗೆ ತಲುಪಿಸುವಲ್ಲಿ ಶ್ರಮಿಸಿದೆ. ಪ್ರತಿ ಚಿತ್ರಕ್ಕೂ ತಮ್ಮದೇ ವಿಭಿನ್ನ, ವಿಶಿಷ್ಟ ಶೈಲಿಯಲ್ಲಿ ಕೆಲಸ ಮಾಡಿ ಪ್ರೇಕ್ಷಕನ ಎದುರು ಹಾಜರಾಗುವ ಕಿಚ್ಚ ಸುದೀಪ್ ಅವರ ಪರಿಶ್ರಮ ಮೆಚ್ಚುವಂತದ್ದು.
ವಿಕ್ರಾಂತ್ ರೋಣ ಸಿನಿಮಾದ ಕಥೆಗೆ ತಕ್ಕಂತೆ ತಮ್ಮ ಹಾವ-ಭಾವ ಬದಲಾಯಿಸಿಕೊಂಡು ಖಡಕ್ ಆಗಿ ನಟನೆಯಲ್ಲಿ ಘರ್ಜಿಸಿದ್ದಾರೆ ಕಿಚ್ಚ ಸುದೀಪ್.
ಸುದೀಪ್ ಅವರ ನಟನಾ ಕೌಶಲ್ಯವನ್ನು ಉಪಯೋಗಿಸಿಕೊಂಡು ನಿರ್ದೇಶಕ ಅನೂಪ್ ಭಂಡಾರಿ ಮತ್ತಷ್ಟು ಅದ್ಭುತವಾಗಿ ಪರದೆಯ ಮೇಲೆ ಚಿತ್ರಿಸಬಹುದಿತ್ತು! ಇನ್ನು ಪ್ರತಿ ಸಿನಿಮಾದಲ್ಲಿ ನಾಯಕಿಯ(Actress) ಪಾತ್ರ ಬಹಳ ಮುಖ್ಯವಾಗುತ್ತದೆ. ಅದರಂತೆ ವಿಕ್ರಾಂತ್ ರೋಣದಲ್ಲಿ ಅಸಲಿಯಾಗಿ ನಾಯಕಿ ಯಾರು?
ಜಾಕ್ವಲೀನ್ ಫರ್ನಾಂಡೀಸ್?(Jacqueline Fernandes) ಅಥವಾ ನೀತಾ ಅಶೋಕ್?(Neetha Ashok) ಎಂಬ ಪ್ರಶ್ನೆ ಕಾಡಿದರೂ ಸುಲಭವಾಗಿಯೇ ನೀತಾ ಅಶೋಕ್ ಎಂದು ಹೇಳಬಹದು. ತಮ್ಮ ಧ್ವನಿಯ ಮೂಲಕ ಪ್ರೇಕ್ಷಕರಿಗೆ ಕಥೆ ಪ್ರಾರಂಭಿಸುವ ನೀತಾ ಅಶೋಕ್, ಕೊನೆಯವರೆಗೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಆದ್ರೆ, ನಟಿ ಜಾಕ್ವಲಿನ್ ಫರ್ನಾಂಡೀಸ್ ಅವಶ್ಯಕತೆ ಈ ಸಿನಿಮಾಗೆ ಇತ್ತಾ? ಗಡಂಗ್ ರಕ್ಕಮ್ಮ ಪಾತ್ರದಲ್ಲಿ ಬಂದು ಒಂದು ಮುಖ್ಯ ಡೈಲಾಗ್(Dialogue) ಜತೆಗೆ ಜನಪ್ರಿಯತೆ ಪಡೆದುಕೊಂಡ ರಾ..ರಾ..ರಕ್ಕಮ್ಮ(Ra Ra Rakkamma) ಹಾಡನ್ನು ಹೊರೆತುಪಡಿಸಿದರೆ ಅವರ ಪಾತ್ರಕ್ಕೆ ಅಷ್ಟು ಜೀವವಿಲ್ಲ!
ಒಟ್ಟಾರೆ ಕಿಚ್ಚ ಸುದೀಪ್ ಅವರನ್ನು `ವಿಕ್ರಾಂತ್ ರೋಣ’ನಾಗಿ ಹಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಕಥೆಯನ್ನು ಕಟ್ಟಿ, ತಮ್ಮದೇ ಶೈಲಿಯಲ್ಲಿ ನಿರ್ಮಿಸಿ, ಸಿನಿಪ್ರೇಕ್ಷಕರ ಮುಂದೆ ಹಾಜರುಪಡಿಸುವಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಯಶಸ್ವಿಯಾಗಿದ್ದಾರೆ.
ವಿಕ್ರಾಂತ್ ರೋಣನಾಗಿ ಮಿಂಚಿದ ಕಿಚ್ಚ ಸುದೀಪ್ ಅವರ ನಟನೆ ಬಗ್ಗೆ ಎರಡನೇ ಮಾತೇ ಇಲ್ಲ. ಅದ್ಬುತವಾಗಿ, ಅಮೋಘವಾಗಿ ಅಭಿನಯಿಸಿ ಸಿನಿಪ್ರೇಕ್ಷಕರು ಹಾಗೂ ಅವರ ಅಭಿಮಾನಿಗಳನ್ನು ಮನರಂಜಿಸಿದ್ದಾರೆ.
ಕನ್ನಡಿಗರಲ್ಲಿ ಮನವಿ : “ಕನ್ನಡ ಸಿನಿಮಾಗಳನ್ನು ಚಿತ್ರಮಂದಿರಗಳಿಗೆ ಹೋಗಿ ವೀಕ್ಷಿಸಿ ವಿನಃ ಪೈರಸಿಯಲ್ಲಿ ಬಂದ ಲಿಂಕ್ ಅಥವಾ ಓಟಿಟಿ ರಿಲೀಸ್ಗೆ ಕಾಯಬೇಡಿ. ಕನ್ನಡ ಚಿತ್ರಗಳನ್ನು ಚಿತ್ರಮಂದಿರಕ್ಕೆ ಹೋಗಿ ವೀಕ್ಷಿಸುವ ಮೂಲಕ ಆಯಾ ಸಿನಿಮಾದ ನಟ, ನಟಿ, ತಂತ್ರಜ್ಞರು ಸೇರಿದಂತೆ ತೆರೆ ಹಿಂದಿನ ತಂತ್ರಜ್ಞರು, ಲೈಟ್ ಬಾಯ್ಸ್ ಎಲ್ಲರ ಶ್ರಮಕ್ಕೆ ಪ್ರೋತ್ಸಾಹ ನೀಡಿದಂತೆಯೇ ಸರಿ”.
- ಮೋಹನ್ ಶೆಟ್ಟಿ