ಬೆಂಗಳೂರು ಅ 6 : ಇತ್ತೀಚಿನ ದಿನಗಳಲ್ಲಿ ವಾಮಾಚಾರದ ಹೆಸರಲ್ಲಿ ಜನರನ್ನು ವಂಚಿಸುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಮನೆಯಲ್ಲಿರುವ ಕುಟುಂಬ ವ್ಯಾಜ್ಯ ಸಮಸ್ಯೆ ಹಾಗೂ ಕಾನೂನು ಸಂಕಷ್ಟದಿಂದ ಪಾರಾಗುತ್ತೀರಿ. ಅದಕ್ಕೆ ವಾಮಾಚಾರ ಮಾಡಿಸಬೇಕೆಂದು ಹೇಳಿ ದಂಪತಿಯೋರ್ವರಿಂದ ಬರೋಬ್ಬರಿ 4.41 ಕೋಟಿ ಹಣ ಕಳೆದುಕೊಂಡ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಬೆಂಗಳೂರಿನ ತ್ಯಾಗರಾಜ ನಗರದ ನಿವಾಸಿಯಾಗಿರುವ ಗೀತಾ ಅನ್ನುವವರ ಕುಟುಂಬ ಕಾನೂನು ವ್ಯಾಜ್ಯದಿಂದ ನೊಂದು ಹೋಗಿತ್ತು. ಅಲ್ಲದೇ ಕುಟುಂಬದಲ್ಲಿ ಸಾಕಷ್ಟು ಸಮಸ್ಯೆಗಳಿತ್ತು. ಈ ವಿಚಾರವನ್ನು ತನ್ನ ಸ್ನೇಹಿತೆಯಾಗಿದ್ದ ಜಯಶ್ರೀ ಎಂಬಾಕೆಯ ಬಳಿಯಲ್ಲಿ ತಿಳಿಸಿದ್ದರು. ನಿಮಗೆ ಯಾರೋ ವಾಮಾಚಾರ ಮಾಡಿಸಿದ್ದಾರೆ. ಇದಕ್ಕೆಲ್ಲಾ ಮರು ಮಾಟ ಮಂತ್ರವೇ ಸೂಕ್ತ. ಇಲ್ಲದಿದ್ರೆ ನಿಮ್ಮ ಸಂಬಂಧಿಕರು ರಕ್ತಕಾರಿ ಸಾವನ್ನಪ್ಪುತ್ತಾರೆ ಅಂತಾ ಹೆದರಿಸಿದ್ದಾಳೆ.
ವಾಮಾಚಾರಕ್ಕೆ ಹೆದರಿದ ಗೀತಾ ಅವರು ವಾಮಾಚಾರ ಮಾಡಿಸೋದಕ್ಕೆ ಒಪ್ಪಿಗೆಯನ್ನು ನೀಡಿದ್ದಾರೆ. ಬಳಿಕ ಮಾಟ ಮಂತ್ರಕ್ಕೆ ಸಂಬಂಧಿಸಿದ ವಸ್ತುಗಳನ್ನ ಮನೆಯ ಮೂಲೆಗಳಲ್ಲಿ ಭೂಷಣ್ ಎಂಬಾತ ಇಟ್ಟು ಹೋಗಿದ್ದ. ನಂತರದಲ್ಲಿ ವಾಮಾಚಾರ ಮಾಡಿಸಿದ್ದಕ್ಕೆ ಜಯಶ್ರೀ ಹಣವನ್ನು ಕೇಳಿದ್ದಾಳೆ. 2020 ಜುಲೈ ನಿಂದ 2021 ಮಾರ್ಚ್ ವರೆಗೆ ಗೀತಾ ಎಂಬವರಿಂದ ಮೊದಲ ಕಂತಲ್ಲಿ 1.42 ಕೋಟಿ, ನಂತರ 30 ಲಕ್ಷ, ಬಳಿಕ 1.72 ಕೋಟಿ, ಮತ್ತೆ 1.90 ಕೋಟಿ, ಹೀಗೆ ಹಲವು ಕಂತುಗಳಲ್ಲಿ ಬರೋಬ್ಬರಿ 4.41 ಕೋಟಿ ಹಣ ಹಣವನ್ನು ಆರೋಪಿ ಜಯಶ್ರೀ ಸೇರಿದಂತೆ ಒಂಬತ್ತು ಮಂದಿ ಆರೋಪಿಗಳು ಸುಮಾರು 13 ಬ್ಯಾಂಕ್ ಖಾತೆಗಳಿಂದ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.