In the wake of Navratri Festival, soaring prices of Flowers, Fruits and Vegetables: a burden on consumers’ pockets.
Bengaluru: ಹಬ್ಬ ಹರಿದಿನಗಳು ಬಂದರೆ ಸಾಕು ಹೂವು, ಹಣ್ಣು, ತರಕಾರಿಗಳ ಬೆಲೆ ಗಗನಕ್ಕೇರುತ್ತದೆ. ಇದೀಗ ನವರಾತ್ರಿ ಹಬ್ಬ (Navaratri Festival) ಆರಂಭವಾಗಿದ್ದು, ಹೂ ಹಣ್ಣು, ತರಕಾರಿ ಮತ್ತು ಅಗತ್ಯ ವಸ್ತುಗಳ ಬೆಲೆ ಜಿಗಿಯುತ್ತಿದೆ. ಗೌರಿ ಗಣೇಶ ಹಬ್ಬದ ನಂತರ ಹೂಗಳ ಬೆಲೆ ಇಳಿಕೆಯಾಗಿತ್ತು. ಆದರೆ ಇದೀಗ ಬೆಲೆ ಮತ್ತೆ ಗಗನಮುಖಿಯಾಗಿದೆ. ಅದರಲ್ಲೂ ಹಬ್ಬ ಬಂದರಂತೂ ಹೂಗಳ ಬೆಲೆ ಏರಿಕೆ ಸಾಮಾನ್ಯವಾಗಿದೆ.

ಮೊಳದ ಲೆಕ್ಕದಲ್ಲಿ ತೆಗೆದುಕೊಂಡರೂ ಅಷ್ಟೇ, ಕೆಜಿ ಲೆಕ್ಕದಲ್ಲಿ ತೆಗೆದುಕೊಂಡರೂ ಅಷ್ಟೇ, ಬೆಲೆ ಮಾತ್ರ ಕಡಿಮೆ ಇಲ್ಲವೇ ಇಲ್ಲ. ರಾಜ್ಯಾದ್ಯಂತ ಉತ್ತಮ ಮಳೆಯಾಗಿದ್ದು, ಉತ್ತಮ ಇಳುವರಿಯೂ ಬಂದಿದೆ. ಹಾಗಾಗಿ ಬೆಳೆಗಾರರು ಮತ್ತು ವ್ಯಾಪಾರಿಗಳ ಮುಖದಲ್ಲಿ ಸಂತಸ ಅರಳಿದೆ. ಆದರೆ ಗ್ರಾಹಕರ ಜೇಬಿಗೆ ಮಾತ್ರ ಹೊರೆಯಾಗಿದೆ.
ಇನ್ನು ಹೂವುಗಳ ಬೆಲೆಯನ್ನು ನೋಡುವುದಾದ್ರೆ ಮಲ್ಲಿಗೆ ಹೂ ಮಾರು ಒಂದಕ್ಕೆ 300-350 ರೂ ನಿಗದಿಯಾಗಿದ್ದರೆ ಸೇವಂತಿಗೆ ಮಾರಿಗೆ 100-150 ರೂ.ಗೆ ಏರಿಕೆಯಾಗಿದೆ.. ಗುಲಾಬಿ ಕೆಜಿಗೆ 300 ರೂ.ಗೆ ಏರಿಕೆಯಾಗಿದೆ. ಕೆಜಿ ಲೆಕ್ಕದಲ್ಲಿ ಸೇವಂತಿಗೆ-300; ಕಾಕಡ-500; ಕನಕಾಂಬರ-900; ಗುಲಾಬಿ-250; ಸುಗಂಧರಾಜ-60 ರೂಗಳಿಗೆ ಮಾರಾಟವಾಗುತ್ತಿದೆ. ಇದು ನಿನ್ನೆ ಮತ್ತು ಇಂದಿನ ಬೆಲೆಯಾಗಿದ್ದು, ಮುಂದೆ ಬೆಲೆ ಏರುತ್ತಲೇ ಹೋಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.

ಹಾಗೆಂದು ಹಣ್ಣುಗಳ ಬೆಲೆ ಕಡಿಮೆ ಏನಿಲ್ಲ. ಅಂಗಡಿಗಳಲ್ಲಿ ದರಪಟ್ಟಿ ನೋಡಿದರೆ ಬರಿಗೈಯಲ್ಲಿ ಹಿಂತಿರುಗಿ ಬರುವ ಪರಿಸ್ಥಿತಿ ಇದೆ. ಮಧ್ಯಮ ವರ್ಗದ ಜನರಂತೂ ಖರೀದಿಗೆ ಹತ್ತು ಬಾರಿ ಯೋಚಿಸುವಂತಾಗಿದೆ. ದಾಳಿಂಬೆ ಕೆಜಿಗೆ 360 ರೂ ಇದ್ದು, 400 ರೂ ತಲುಪಲಿದೆ ಎಂದು ಹಣ್ಣಿನ ವ್ಯಾಪಾರಿಗಳೇ ಹೇಳುತ್ತಾರೆ. ಸೇಬು ಕೆಜಿಗೆ 280-300 ರೂ ಗೆ ನಿಗದಿಯಾಗಿದೆ.
ಸಾಮಾನ್ಯ ಸೇಬಿನ ಬೆಲೆ 200 ರೂ. ಆಸುಪಾಸಿನಲ್ಲಿದೆ. ಸೀತಾಫಲದ ಬೆಲೆ 160 ರೂ, ಬಾಳೆಹಣ್ಣಿನ ಬೆಲೆ 120 ರೂ.ಗೆ ಮಾರಾಟವಾಗುತ್ತಿದೆ. ತೆಂಗಿನ ಕಾಯಿ ಬೆಲೆ ಗಾತ್ರದ ಮೇಲೆ ನಿಗದಿಯಾಗಿದ್ದು, ಉತ್ತಮ ಕಾಯಿಯ ಬೆಲೆ 35 ರೂ.ಗೆ ಮಾರಾಟವಾಗುತ್ತಿದೆ. (Fruits) ಬಿಡಿ ಬಾಳೆಎಲೆ ಒಂದಕ್ಕೆ 10 ರೂ.ಗೆ ಮಾರಲಾಗುತ್ತಿದೆ. ಇನ್ನು ತರಕಾರಿ ಬೆಲೆಯೂ ಮುಂದಿನ ದಿನಗಳಲ್ಲಿ ಹೆಚ್ಚುತ್ತದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಬೀಳೋದಂತೂ ಖಚಿತವಾಗಿದೆ .