ವಿಜಯಪುರ ಸೆ 28 : ಮಾಜಿ ಸಚಿವ ಎಂ.ಸಿ. ಮನಗೂಳಿ ಅವರ ನಿಧನದಿಂದ ತೆರವಾದ ಸಿಂದಗಿ ಕ್ಷೇತ್ರ ಹಾಗೂ ಸಿ.ಎಂ. ಉದಾಸಿ ಅವರ ನಿಧನದಿಂದ ತೆರವಾದ ಹಾನಗಲ್ ಕ್ಷೇತ್ರದ ಉಪ ಚುನಾವಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಅ.30ಕ್ಕೆ ಮತದಾನ ಪ್ರಕ್ರಿಯೆ ಚುನಾವಣೆ ನಡೆಯಲಿದೆ.
ಕರೊನಾ ಸಾಂಕ್ರಾಮಿಕ ಕಾಯಿಲೆ, ನೆರೆ ಹಾವಳಿ, ಅತೀವೃಷ್ಠಿ ಹೀಗೆ ಒಂದಲ್ಲಾ ಒಂದು ಕಾರಣದಿಂದ ವಿಜಯಪುರ ಜಿಲ್ಲೆಯ ಸಿಂದಗಿ ಹಾಗೂ ಹಾವೇರಿ ಜಿಲ್ಲೆಯ ಹಾನಗಲ್ ವಿಧಾನ ಸಭೆ ಕ್ಷೇತ್ರಕ್ಕೆ ಚುನಾವಣೆ ಮುಂದೂಡಲ್ಪಟ್ಟಿತ್ತು ಆದರೆ ಇದೀಗ ದಿನಾಂಕ ನಿಗದಿಗೊಳಿಸಿ ಕೇಂದ್ರ ಚುನಾವಣೆ ಆಯೋಗ ಮಂಗಳವಾರ ಅಧಿಸೂಚನೆ ಹೊರಡಿಸಿದೆ. ಇದೀಗ ಚುನಾವಣೆಗೆ ಕಾಲ ಕೂಡಿ ಬಂದಿದ್ದು, ದೇಶದ ಮೂರು ಕೇಂದ್ರಾಡಳಿತ ಪ್ರದೇಶ ಹಾಗೂ 30 ವಿಧಾನ ಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು ಆ ಪೈಕಿ ರಾಜ್ಯದ ಎರಡು ಕ್ಷೇತ್ರಗಳಿಗೂ ಚುನಾವಣೆ ನಿಗದಿಗೊಳಿಸಲಾಗಿದೆ. ಎಂದು ಚುನಾವಣಾ ಆಯೋಗ ಹೇಳಿದೆ.
ಈ ಉಪ ಚುನಾವಣೆಗೆ ಅ.1 ರಿಂದ ಚುನಾವಣೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಅ. 8 ನಾಮಪತ್ರ ಸಲ್ಲಿಸಲು ಅಂತಿಮ ದಿನ. ನಾಮಪತ್ರ ಹಿಂಪಡೆಯಲು ಅ. 13 ಅಂತಿಮ ದಿನವಾಗಿದೆ. ಅ. 30 ರಂದು ಮತದಾನ ನಡೆಯಲಿದೆ. ನ.2 ರಂದು ಮತ ಎಣಿಕೆ ನಡೆಯಲಿದೆ. ನ. 11ಕ್ಕೆ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.