ಬೆಂಗಳೂರು, ಫೆ. 03: ಚಿತ್ರಮಂದಿರಗಳಲ್ಲಿ ಶೇ.100 ಪ್ರೇಕ್ಷಕರ ಭರ್ತಿಗೆ ಅವಕಾಶ ನೀಡಬೇಕೆಂಬ ಸ್ಯಾಂಡಲ್ವುಡ್ ಬೇಡಿಕೆಗೆ ಸಂಬಂಧಿಸಿದಂತೆ ಶೀಘ್ರವೇ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭರವಸೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೊರೊನಾ ಬಿಕ್ಕಟ್ಟಿನಿಂದ ಉಂಟಾದ ಲಾಕ್ ಡೌನ್ ಮತ್ತು ನಂತರ ದಿನಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಹೇರಲಾಗಿದ್ದ ನಿರ್ಬಂಧಗಳಿಂದ ನಷ್ಟ ಅನುಭವಿಸಿದ ಕ್ಷೇತ್ರಗಳಲ್ಲಿ ಚಿತ್ರರಂಗವೂ ಒಂದು ಎಂಬ ಅರಿವಿದೆ. ಚಿತ್ರರಂಗ ಜನರಿಗೆ ಮನರಂಜನೆ ನೀಡುವುದಷ್ಟೇ ಅಲ್ಲದೆ, ಸಾವಿರಾರು ಜನರಿಗೆ ಜೀವನೋಪಾಯ ಒದಗಿಸಿರುವ ಉದ್ಯಮವೂ ಹೌದು.
ಹೀಗಾಗಿ, ನಾಡಿನ ಸಮಸ್ತ ಜನರ ಆರೋಗ್ಯ ಮತ್ತು ಚಿತ್ರೋದ್ಯಮದ ಒಳಿತು ಎರಡನ್ನೂ ಗಮನದಲ್ಲಿಟ್ಟುಕೊಂಡು ತಜ್ಞ ವೈದ್ಯರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಚಿತ್ರಮಂದಿರಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯುವ ಕುರಿತು ಶೀಘ್ರವೇ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.