ನವದೆಹಲಿ, ಮೇ. 27: ಹವಾಮಾನ ವೈಪರೀತ್ಯದ ನಡುವೆಯೂ 24 ಗಂಟೆಗಳ ಅವಧಿಯೊಳಗೆ 12 ಆಕ್ಸಿಜನ್ ಎಕ್ಸ್ಪ್ರೆಸ್ ರೈಲುಗಳು 969 ಟನ್ ವೈದ್ಯಕೀಯ ಆಮ್ಲಜನಕವನ್ನು 6 ರಾಜ್ಯಗಳಿಗೆ ಸಾಗಿಸಿವೆ ಎಂದು ಬುಧವಾರ ರೈಲ್ವೆ ಇಲಾಖೆಯು ತಿಳಿಸಿದೆ.
ಒಡಿಶಾ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ರಾಜ್ಯಗಳಿಂದ ಆಮ್ಲಜನಕವನ್ನು ಸಂಗ್ರಹಿಸಿಕೊಂಡು ಮೂರು ರೈಲುಗಳು ತಮಿಳುನಾಡನ್ನು, ನಾಲ್ಕು ರೈಲುಗಳು ಆಂಧ್ರಕ್ಕೆ, ತಲಾ ಒಂದೊಂದು ರೈಲುಗಳು ದೆಹಲಿ, ಮಧ್ಯಪ್ರದೇಶ, ಉತ್ತರ ಪ್ರದೇಶ, ಅಸ್ಸಾಂ ಮತ್ತು ಕೇರಳಕ್ಕೆ ತಲುಪಿವೆ ಎಂದು ಇಲಾಖೆ ಮಾಹಿತಿ ನೀಡಿದೆ.
ಉತ್ತರ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಿಗೆ ಬುಧವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ 130ರಿಂದ 140 ಕಿ.ಮೀ. ಗಾಳಿಯ ವೇಗದಲ್ಲಿ ಯಸ್ ಚಂಡಮಾರುತ ಅಪ್ಪಳಿಸಿತ್ತು. ಇದರ ನಡುವೆಯೇ ಈ ರಾಜ್ಯಗಳಲ್ಲಿ ಸಮುದ್ರತೀರದ ಪಟ್ಟಣ ಪ್ರದೇಶಗಳನ್ನು ಹಾದು ಬಂದ ಆಕ್ಸಿಜನ್ ಎಕ್ಸ್ಪ್ರೆಸ್ ರೈಲುಗಳು ಸುಮಾರು ಪ್ರತಿಕೂಲ ಹವಾಮಾನ ಪರಿಸ್ಥಿತಿಯ ನಡುವೆಯೇ ತಮ್ಮ ಸ್ಥಾನಗಳಿಗೆ ತಲುಪಿವೆ.