ಬೆಂಗಳೂರು, ಫೆ. 09: ಮೋದಿ ಅವರನ್ನು ಹೊಗಳಿ ಜ್ಞಾನವೇ? ಎಂದು ಬಿಜೆಪಿ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಅವರನ್ನು
ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸಿಗರ ಅಲ್ಪಜ್ಞಾನದ ಬಗ್ಗೆ ಮಾತನಾಡಿರುವ ಬಿಜೆಪಿ ವಕ್ತಾರ ಗಣೇಶ್ ಕಾರ್ನಿಕ್ ಅವರು ಯಾವ ಬೋಧಿವೃಕ್ಷದ ಕೆಳಗೆ ಕುಳಿತು ಜ್ಞಾನ ಸಂಪಾದಿಸಿಕೊಂಡಿದ್ದಾರೆ?. ಮೋದಿಯವರನ್ನು ಹೊಗಳಿ ಅಟ್ಟಕೇರಿಸುವುದೇ ಕಾರ್ಣಿಕ್ರವರ ಪ್ರಕಾರ ಜ್ಞಾನವೇ? ಎಂದು ಪ್ರಶ್ನಿಸಿದ್ದಾರೆ.
ವಾಸ್ತವ ಅರಿಯದೆ ಭ್ರಮೆಯಲ್ಲಿ ಬದುಕುವುದೂ ಕೂಡ ಅಜ್ಞಾನ ಎಂಬ ಕನಿಷ್ಟ ಜ್ಞಾನವನ್ನು ಕಾರ್ಣಿಕ್ ಬೆಳಸಿಕೊಳ್ಳಲಿ. 2
ಮೋದಿಯವರ ಆಡಳಿತವನ್ನು ಹಿಟ್ಲರ್ ಆಡಳಿತಕ್ಕೆ ಹೋಲಿಸಿದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಕೇಂದ್ರ ಸರ್ಕಾರದ ಪ್ರತಿ ನೀತಿ ನಿರ್ಧಾರಗಳಲ್ಲೂ ಹಿಟ್ಲರ್ನ ಸರ್ವಾಧಿಕಾರಿ ಧೋರಣೆ ಕಾರ್ಣಿಕ್ರವರಿಗೆ ಕಾಣಿಸುತ್ತಿಲ್ಲವೆ?
ಅಥವಾ ಗೊತ್ತಿದ್ದರೂ ಜಾಣ ಕುರುಡೇ? ಸಂವಿಧಾನ ಬದಲಿಸುವ ಮನಸ್ಥಿತಿಯವರಿಗೂ ಹಿಟ್ಲರ್ಗೂ ಏನಾದರೂ ವ್ಯತ್ಯಾಸವಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ, ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್, ಮೋದಿ ಆಡಳಿತದ ಯಾವ ಅಭಿವೃದ್ಧಿ ಪಥದ ಬಗ್ಗೆ ಮಾತನಾಡುತ್ತಿದ್ದಾರೆ?ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಿದ್ದು, ಕಾರ್ಪೋರೆಟ್ ಸ್ನೇಹಿತರಿಗಾಗಿ ರೈತರ ಕುತ್ತಿಗೆ ಇಸುಕುತ್ತಿರುವುದು, GDP ಯನ್ನು ಪಾತಾಳಕ್ಕೆ ಇಳಿಸಿದ್ದು, ಇಂಧನ ಬೆಲೆಯೇರಿಸಿ ಜನರನ್ನು ಸುಲಿಗೆ ಮಾಡುತ್ತಿರುವುದು ಅಭಿವೃದ್ಧಿಯ ಪಥವೆ? ಎಂದು ಟೀಕಿಸಿದ್ದಾರೆ.