ಬೆಂಗಳೂರು ಜ 10 : ಪಾದಯಾತ್ರೆ ಕುರಿತು ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರಿಗೆ ಸವಾಲು ಹಾಕಿದ ಡಿ.ಕೆ. ಶಿವಕುಮಾರ್ ಅವರನ್ನು ಬಿಜೆಪಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ರಾಜ್ಯದ ಗೃಹ ಸಚಿವರಿಗೆ ಸವಾಲನ್ನು ಹಾಕಿ ಡಿ. ಕೆ ಶಿವಕುಮಾರ್ ಪುಡಿ ರೌಡಿಯ ರೀತಿ ವರ್ತಿಸುತ್ತಿದ್ದಾರೆ, ನೀವು ರೌಡಿ ಕೊತ್ವಾಲನಾ ಶಿಷ್ಯ ಎಂದು ತೋರಿಸಿಕೊಡುತ್ತಿದೀರಾ? ಎಂದು ಬಿಜೆಪಿ ಟೀಕಿಸಿದೆ.
ಸರಣಿ ಟ್ವಿಟ್ ಮಾಡಿ ಪಾದಯಾತ್ರೆಯನ್ನು ತಡೆಯಲು ರಾಜ್ಯ ಗೃಹ ಸಚಿವರು ಇನ್ನೊಂದು ಜನ್ಮವನ್ನು ಎತ್ತಿ ಬರಬೇಕು, ತಾಕತ್ತಿದ್ದರೆ ತಡೆಯಿರಿ ನೋಡೋಣ ಎಂದು ಸವಾಲನ್ನು ಹಾಕಿ ಪುಡಿ ರೌಡಿಯ ರೀತಿ ವರ್ತಿಸುತ್ತಿದ್ದಾರೆ, ಡಿಕೆಶಿ ನೀವು ರೌಡಿ ಕೊತ್ವಾಲನ ಶಿಷ್ಯ ಎಂದು ಎಲ್ಲರಿಗೂ ತೋರಿಸಿಕೊಡುತ್ತಿದ್ದೀರಾ ಎಂದು ಟ್ವಿಟ್ಟರ್ ನ ಮೂಲಕ ಬಿಜೆಪಿ ಟೀಕಿಸಿದೆ.
ಮೇಕೆದಾಟು ಯೋಜನೆಯ ವಿಷಯದಲ್ಲಿ ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷದ ಡಿಎಂಕೆ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿದೆ. ಆದರೆ ಮೇಕೆದಾಟು ಯೋಜನೆಯನ್ನು ಜಾರಿಗೆ ತರಲು ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆಯನ್ನು ನಡೆಸಬೇಕಿರುವುದು ಯಾರ ವಿರುದ್ಧ? ಎಂದು ಪ್ರಶ್ನಿಸಿದೆ. ಮೇಕೆದಾಟು ಯೋಜನೆ ಈಗ ಸ್ಟ್ಯಾಲಿನ್ ಸರ್ಕಾರದ ಅಂಗಳದಲ್ಲಿದೆ. ನೀವು ಸುಳ್ಳನ್ನು ಹೇಳಿಕೊಂಡು ಪಾದಯಾತ್ರೆ ಎಂಬ ಜಾತ್ರೆಯನ್ನು ಮಾಡುವ ಬದಲು ಅವರೊಂದಿಗೆ ಮಾತುಕತೆ ನಡೆಸಿ ಎಂದು ಸಲಹೆಯನ್ನು ನೀಡಿದೆ.
ಮೇಕೆದಾಟು ಯೋಜನೆಗೆ ತಡೆಯನ್ನು ಕೋರಿ ಯಾರು ಸುಪ್ರೀಂಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿದ್ದರೋ ಆ ಸರ್ಕಾರದೊಂದಿಗೆ ತಮಿಳುನಾಡಿನಲ್ಲಿ ಕಾಂಗ್ರೆಸ್ ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಮೈತ್ರಿಯಲ್ಲಿದೆ. ಸೋನಿಯಾ ಗಾಂಧಿಯವರ ಕುಮ್ಮಕ್ಕಿನ ಸಹಾಯದಿಂದ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಯ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದೇ?’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.