ಬೆಂಗಳೂರು, ಜ. 04: ಸರ್ಕಾರ ಮತ್ತು ಬಿಬಿಎಂಪಿ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ವತಿಯಿಂದ ತೆರಿಗೆ ಹೆಚ್ಚಳ ಖಂಡಿಸಿ ಬಿಬಿಎಂಪಿ ಚಲೋ ಚಳವಳಿ ನಡೆಸಲಾಯಿತು.
ಮೈಸೂರು ಬ್ಯಾಂಕ್ ವೃತ್ತದಿಂದ ಬಿಬಿಎಂಪಿ ಚಲೋ ಆರಂಭಿಸಿದ ಕೈ ಕಾರ್ಯಕರ್ತರು, ಸಂಕಷ್ಟದ ಕಾಲದಲ್ಲಿ ಜನರ ಮೇಲೆ ತೆರಿಗೆ ಹೊರೆ ಹಾಕಲಾಗುತ್ತಿದೆ ಎಂದು ದೂರಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಂಸದರು, ಮಾಜಿ ಸಚಿವರು, ಶಾಸಕರು ಹಾಗೂ ಪಕ್ಷದ ಹಿರಿಯ ಮುಖಂಡರು ಪ್ರತಿಭಟನೆ ನಡೆಸಿದರು. ಬಿಬಿಎಂಪಿ ಚಲೋ ಹಿನ್ನೆಲೆಯಲ್ಲಿ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಟ್ರಾಫಿಕ್ ಜಾಮ್ ಉಂಟಾಯಿತು.
ಕಾಂಗ್ರೆಸ್ ಹಕ್ಕೊತ್ತಾಯಗಳು ಇಂತಿವೆ:
- ಹೈದರಾಬಾದ್ ಪಾಲಿಕೆ ಮಾದರಿಯಲ್ಲಿ ಆಸ್ತಿ ತೆರಿಗೆ ವಿನಾಯಿತಿ
- ಕಟ್ಟಡ ನಿರ್ಮಾಣ ನಕ್ಷೆ ಮಂಜೂರಾತಿಗೆ ವಿಧಿಸುವ ಶುಲ್ಕ ಕಡಿತ
- ಕಸದ ಮೇಲೆ ವಿಧಿಸಿರುವ ಸೆಸ್ 200 ರೂ. ರದ್ದು ಮಾಡಬೇಕು
- ರಸ್ತೆ ಸಾರಿಗೆಗೆ ವಿಧಿಸಿರುವ ಶೇ.2ರಷ್ಟು ತೆರಿಗೆ ರದ್ದು ಮಾಡಬೇಕು
- 3 ಸಾವಿರ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆ ಮಾಡಬೇಕು
- ಇಂದಿರಾ ಕ್ಯಾಂಟೀನ್ ಮುಂದುವರಿಸಬೇಕು
- ಸಾರ್ವಜನಿಕರ ಅಗತ್ಯಕ್ಕೆ ಬೇಕಾದಷ್ಟು ಶೌಚಾಲಯ ನಿರ್ಮಿಸಬೇಕು
- ಪ್ಲ್ಯಾಸ್ಟಿಕ್ ಮುಕ್ತ, ಕಸ ಮುಕ್ತ ಬೆಂಗಳೂರು ಮಾಡಬೇಕು
- ಲಾಕ್ಡೌನ್ ವೇಳೆ ನಡೆದ ಅವ್ಯವಹಾರಗಳ ಬಗ್ಗೆ ತನಿಖೆ
- ಕೊರೊನಾಗೆ ಬಲಿಯಾದವರ ಕುಟುಂಬಗಳಿಗೆ ಪರಿಹಾರ
- ಮಳೆಹಾನಿ ತಡೆಗೆ ವಿಶೇಷ ಕಾರ್ಯಪಡೆ ಸ್ಥಾಪಿಸಬೇಕು