ಬೆಂಗಳೂರು ಸೆ 17 : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣ ಮಾಡುವ ಯೋಜನೆಯಿಲ್ಲ ಎಂದು ಇಂಧನ ಸಚಿವ ವಿ. ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ರಾಜ್ಯದಲ್ಲಿ ಇಂಧನ ವಲಯವನ್ನು ಯಾವುದೇ ರೀತಿಯ ಖಾಸಗೀಕರಣಕ್ಕೆ ಒಳಪಡಿಸಲಾಗುವುದಿಲ್ಲ. ಆ ಉದ್ದೇಶ ಸಹ ಸರ್ಕಾರದ ಮುಂದಿಲ್ಲ ಎಂದು ಅವರು ಹೇಳಿದ್ದಾರೆ. ವಿದ್ಯುತ್ ವಲಯದ ಖಾಸಗೀಕರಣ ವಿಚಾರ ಕೇವಲ ಊಹಾಪೋಹ ಎಂದು ಅವರು ಸ್ಪಷ್ಟಪಡಿಸಿದ್ದಾರೆ
ಜೊತೆಗೆ ಹಾಗೆಯೇ ರಾಜ್ಯದಲ್ಲಿ 169 ಟ್ರಾನ್ಸ್ಫಾರ್ಮರ್ ದುರಸ್ತಿ ಕೇಂದ್ರಗಳನ್ನು ಸಹ ಸ್ಥಾಪನೆ ಮಾಡಲಾಗಿದೆ. 24 ಗಂಟೆಗಳೊಳಗಾಗಿ ಟಿಸಿ ದುರಸ್ತಿ ಮಾಡುವಂತಹ ವ್ಯವಸ್ಥೆಗಾಗಿ ಇಲಾಖೆ ವಿಶೇಷ ಅಪ್ಲಿಕೇಶನ್ ರೂಪಿಸಲಿದೆ ಎಂದು ಹೇಳಿದ್ದಾರೆ. ಇದರಿಂದ ಟಿಸಿಗಳು ಕೆಟ್ಟು ಹೋದ ತಕ್ಷಣದಲ್ಲೇ ದುರಸ್ತಿ ಮಾಡುವುದು ಸಾಧ್ಯವಾಗುತ್ತದೆ. ಹಾಗೆಯೇ ಯಾವಾಗ ಮತ್ತೆ ಬಳಕೆಗೆ ಯೋಗ್ಯವಾಗುತ್ತದೆ ಎಂಬುದರ ಬಗೆಗೂ ಜನರು ಕುಳಿತಲ್ಲೇ ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರಿಪೇಯ್ಡ್ ಮೀಟರ್ನತ್ತ ಒಲವು : ರೈತರ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವ ಚಿಂತನೆ ಸಹ ನಮ್ಮ ಮುಂದಿಲ್ಲ. ಆದರೆ ಕೇಂದ್ರ ಸರ್ಕಾರದ ‘ರಿವ್ಯಾಂಪ್ಡ್ ಡಿಸ್ಟ್ರಿಬ್ಯೂಷನ್ ಸೆಕ್ಟರ್ ಸ್ಕೀಮ್’ (ಆರ್ಡಿಎಸ್ಎಸ್) ಯೋಜನೆಯಡಿ ಪ್ರಿಪೇಯ್ಡ್ ಮೀಟರ್ಗಳನ್ನು ಮೊದಲನೇ ಹಂತದಲ್ಲಿ ಸರ್ಕಾರಿ ಕಚೇರಿ ಹಾಗೂ ಬೆಸ್ಕಾಂ ವ್ಯಾಪ್ತಿಯಲ್ಲಿ ಒಂದು ಲಕ್ಷ ಕಟ್ಟಡಗಳಿಗೆ ಅಳವಡಿಸಲಾಗುವುದು. ಶೇ. 15ಕ್ಕಿಂತ ಹೆಚ್ಚು ಸರಾಸರಿ ತಾಂತ್ರಿಕ ಹಾಗೂ ವಾಣಿಜ್ಯ ನಷ್ಟಇರುವ ನಗರ ಮತ್ತು ಪಟ್ಟಣಗಳಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ, ಎಲ್ಲ ತಾಲ್ಲೂಕು ಮಟ್ಟದ ಮತ್ತು ಮೇಲ್ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ’ ಎಂದು ಅವರು ವಿವರಿಸಿದರು.