ನವದೆಹಲಿ, ಜ. 08: ಇದೀಗ ದೇಶ ವ್ಯಾಪಿ ಹರಡುತ್ತಿರುವ ಇಂಗ್ಲೆಂಡಿನ ರೂಪಾಂತರ ಕೊರೋನಾ ವೈರಸ್ ಆತಂಕವನ್ನೆ ಸೃಷ್ಟಿಸಿದೆ. ಈ ಅಪಾಯಕಾರಿ ವೈರಸ್ ನಿಯಂತ್ರಿಸಲು ಭಾರತ ಸೇರಿ ಅನೇಕ ದೇಶಗಳಲ್ಲಿ ಇಂಗ್ಲೆಂಡ್ ವಿಮಾನಗಳ ಮೇಲೆ ನಿರ್ಬಂಧ ಹೇರಲಾಗಿತ್ತು.
ಇಂಗ್ಲೆಂಡ್ನಲ್ಲಿ ಮ್ಯೂಟಂಟ್ ಕೊರೋನಾ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ವಿಮಾನ ಸಂಚಾರದ ಮೇಲೆ ನಿನ್ನೆಯವರೆಗೆ ನಿರ್ಬಂಧ ವಿಧಿಸಲಾಗಿತ್ತು. ಇಂದಿನಿಂದ ನಿರ್ಬಂಧವನ್ನು ತೆರವುಗೊಳಿಸಲಾಗಿದ್ದು, ಭಾರತದಲ್ಲಿ ದಿನದಿಂದ ದಿನಕ್ಕೆ ರೂಪಾಂತರಿ ಕೊರೋನಾ ಕೇಸ್ಗಳು ಹೆಚ್ಚುತ್ತಿರುವ ಬೆನ್ನಲ್ಲೇ ಇಂದು ಇಂಗ್ಲೆಂಡ್ನಿಂದ 256 ಪ್ರಯಾಣಿಕರನ್ನು ಹೊತ್ತು ತಂದ ಏರ್ ಇಂಡಿಯಾ ವಿಮಾನ ದೆಹಲಿಗೆ ತಲುಪಿರುವುದು ಇನ್ನಷ್ಟು ಆತಂಕ ಹೆಚ್ಚಿಸಿದೆ. ಲಂಡನ್ನ ಹೀಥ್ರೋ ವಿಮಾನ ನಿಲ್ದಾಣದಿಂದ ಇಂದಿರಾಗಾಂಧಿ ಇಂಟರ್ ನ್ಯಾಷನಲ್ ವಿಮಾನ ನಿಲ್ದಾಣಕ್ಕೆ ಇಂದು ಬೆಳಗ್ಗೆ ಬಂದಿಳಿದ ಏರ್ ಇಂಡಿಯಾ ವಿಮಾನದಲ್ಲಿ 256 ಪ್ರಯಾಣಿಕರಿದ್ದರು.
ಇಂಗ್ಲೆಂಡ್ನಲ್ಲಿ ರೂಪಾಂತರ ಕೊರೋನಾ ಕೇಸ್ಗಳು ವ್ಯಾಪಕವಾಗಿ ಹರಡತೊಡಗಿದ ನಂತರ ಮುನ್ನೆಚ್ಚರಿಕಾ ಕ್ರಮವಾಗಿ ಡಿ. 23ರಿಂದ ಇಂಗ್ಲೆಂಡ್-ಭಾರತ ನಡುವಿನ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ದೆಹಲಿಗೆ ಇಂದು ಆಗಮಿಸಿರುವ ಪ್ರಯಾಣಿಕರು 10 ಗಂಟೆಗಳ ಕಾಲ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಬಳಿಕ ಅವರನ್ನು ಕ್ವಾರಂಟೈನ್ ಆಗಲು ದೆಹಲಿ ಸರ್ಕಾರ ಸೂಚಿಸಿದೆ. ಹಾಗೇ, ಮುನ್ನೆಚ್ಚರಿಕಾ ಕ್ರಮವಾಗಿ ಜನವರಿ 31ರವರೆಗೆ ಇಂಗ್ಲೆಂಡ್ನ ವಿಮಾನಗಳ ಸಂಚಾರಕ್ಕೆ ನಿರ್ಬಂಧ ಹೇರುವಂತೆ ಕೇಂದ್ರ ಸರ್ಕಾರಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ.