Bengaluru: ರಾಜ್ಯದ ನಾಲ್ಕು ಪ್ರಮುಖ ಐತಿಹಾಸಿಕ ಸ್ಥಳ (Historical place)ಗಳಲ್ಲಿ ಉತ್ಖನನ ನಡೆಸಲು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮುಂದಾಗಿದೆ. ಈ ಕುರಿತು ಇತಿಹಾಸ ತಜ್ಞರು ಮತ್ತು ಪರಿಣಿತರೊಂದಿಗೆ ಚರ್ಚೆಯನ್ನು ನಡೆಸಲಾಗಿದ್ದು, ಕೇಂದ್ರ ಸರ್ಕಾರದ (Central Government) ಅನುಮತಿಯೊಂದಿಗೆ ಈ ಕಾರ್ಯ ನಡೆಸಲಾಗುತ್ತದೆ.

ಮೂಲಗಳ ಪ್ರಕಾರ, ಮೈಸೂರು (Mysore) ಜಿಲ್ಲೆಯ ತಲಕಾಡು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಣ್ಣೆ ಸೇರಿದಂತೆ ರಾಜ್ಯದ 4 ಐತಿಹಾಸಿಕ ನಿವೇಶನಗಳನ್ನು ಉತ್ಖನನ ಮಾಡಲು ರಾಜ್ಯ ಪುರಾತತ್ವ ಇಲಾಖೆ ಗುರುತಿಸಿದೆ. ಆದರೆ ಕೇಂದ್ರ ಪುರಾತತ್ವ ಇಲಾಖೆಯಿಂದ ಸದ್ಯಕ್ಕೆ ಮೈಸೂರು ಜಿಲ್ಲೆಯ ತಲಕಾಡಿನ (Talakadu) ಉತ್ಖನನಕ್ಕೆ ಮಾತ್ರ ಅನುಮತಿ ಸಿಕ್ಕಿದೆ.
ಇನ್ನು ಪುರಾತನ ಅವಶೇಷಗಳನ್ನು ಸಂಸ್ಕರಿಸುವ ಮತ್ತು ದಾಖಲು ಮಾಡುವ ನಿಟ್ಟಿನಲ್ಲಿ ಪುರಾತತ್ವ ಇಲಾಖೆಯು ಐತಿಹಾಸಿಕ ಸ್ಥಳಗಳಲ್ಲಿ ಹಮ್ಮಿಕೊಳ್ಳುತ್ತಿದ್ದ ಉತ್ಖನನ ಕಾರ್ಯವನ್ನು ಕೋವಿಡ್ (Covid) ನಂತರ ನಿಲ್ಲಿಸಲಾಗಿತ್ತು. ತಲಕಾಡು (ಮೈಸೂರು), ಹಂಪಿ (ವಿಜಯನಗರ), ಮಣ್ಣೆ (ಬೆಂಗಳೂರು ಗ್ರಾಮಾಂತರ), ಲಕ್ಕುಂಡಿ (ಗದಗ) ಜಾಗಗಳನ್ನು ಗುರುತಿಸಿದೆ. ಈ ಮಧ್ಯೆ ವಿಜಯನಗರ ಜಿಲ್ಲೆಯ ಹಂಪಿಯಲ್ಲಿಉತ್ಖನನ ನಡೆಸಲು ಕೇಂದ್ರದ ಆರ್ಕೆಯಾಲಜಿಕಲ್ ಸರ್ವೆ ಆಫ್ ಇಂಡಿಯಾಗೆ (Archaeological Survey of India) ರಾಜ್ಯದಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಗಂಗರ ರಾಜಧಾನಿಯಾಗಿದ್ದ ಮಣ್ಣೆ ಮತ್ತು ಲಕ್ಕುಂಡಿ (Lakkundi) ಯಲ್ಲಿ ತಜ್ಞರು ತಂಡದಿಂದ ನಿವೇಶನದ ಪರಿಶೀಲನೆ ಕಾರ್ಯ ಚಾಲ್ತಿಯಲಿದೆ.

ಯಂತ್ರೋಪಕರಣಗಳ ಬಳಕೆ ಇಲ್ಲ: ಯಂತ್ರ ಬಳಸಿದರೆ ಅವಶೇಷಗಳಿಗೆ ಹಾನಿಯಾಗಬಹುದು ಎಂಬ ಕಾರಣದಿಂದಾಗಿ ಕಾರ್ಮಿಕರ ಮೂಲಕವೇ ಉತ್ಖನನ ಕಾರ್ಯ ನಡೆಯಲಿದೆ. ಹೀಗಾಗಿ ಈ ಕಾರ್ಯಕ್ಕೆ ನರೇಗಾ ಕಾರ್ಡ್ (Narega Card) ಹೊಂದಿರುವವರನ್ನೇ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಮಣ್ಣೆ: ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು (Tyamagondlu) ಹೋಬಳಿಯಲ್ಲಿನ ಮಣ್ಣೆ, ಈ ಹಿಂದೆ ಗಂಗರ ರಾಜಧಾನಿಯಾಗಿತ್ತು. ಇಲ್ಲಿರುವ ಕಪಿಲೇಶ್ವರ ಸ್ವಾಮಿ ದೇವಸ್ಥಾನ ಪ್ರಮುಖ ಐತಿಹಾಸಿಕ ಕೇಂದ್ರವಾಗಿದೆ. ಗಂಗರ ನಂತರ ಮಣ್ಣೆ ರಾಷ್ಟ್ರಕೂಟದ ಕಾಲದಲ್ಲಿ ಪ್ರಮುಖ ವ್ಯಾಪಾರ ಮತ್ತು ರಾಜಕೀಯ ಕೇಂದ್ರವಾಗಿತ್ತು ಎಂಬ ಉಲೇಖಗಳಿವೆ.