ಹೈದರಾಬಾದ್, ಮೇ. 08: ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿರುವ ಕ್ವಾರಿಯಲ್ಲಿ ಕಲ್ಲು ಒಡೆಯುವ ಸ್ಫೋಟಕ ಸ್ಫೋಟಗೊಂಡ ಪರಿಣಾಮ 10ಕ್ಕೂ ಹೆಚ್ಚು ಮಂದಿ ಕೆಲಸಗಾರರು ಮೃತಪಟ್ಟಿದ್ದಾಗಿ ವರದಿಯಾಗಿದೆ. ಇಲ್ಲಿ ಕೆಲಸಗಾರರು ಸ್ಫೋಟಕವನ್ನು ಅಳವಡಿಸಲು ಗ್ರಾನೈಟ್ನ್ನು ಕೊರೆಯುತ್ತಿದ್ದ ವೇಳೆ ಏಕಾಏಕಿ ಸ್ಫೋಟಗೊಂಡಿದೆ. ಸದ್ಯ 10 ಮೃತದೇಹಗಳಷ್ಟೇ ಪತ್ತೆಯಾಗಿದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ.
ಕಡಪಾದ ಕಳಸಪಾಡು ಬ್ಲಾಕ್ನಲ್ಲಿರುವ ಮಾಮಿಲ್ಲಪಲ್ಲೆ ಗ್ರಾಮದಲ್ಲಿ ಇಂದು ಬೆಳಗ್ಗೆ ದುರ್ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ, ಪೊರುಮಾಮಿಲ್ಲಾ ಠಾಣೆ ಪೊಲೀಸ್ ಅಧಿಕಾರಿ, ಸ್ಫೋಟವಾಗಿದ್ದು ಗ್ರಾನೈಟ್ ಕೊರೆಯುವಾಗ ಎಂದು ಹೇಳಲಾಗುತ್ತಿದೆ. ಆದರೆ ನಮ್ಮ ತನಿಖೆ ಪ್ರಕಾರ ಸ್ಫೋಟಕಗಳನ್ನು ಕ್ವಾರಿಗೆ ಸಾಗಿಸುವಾಗ ಈ ದುರಂತ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಇದರಲ್ಲಿ ಮೃತಪಟ್ಟವರು ಬಹುತೇಕ ಪುಲಿವೆಂದುಲಾದವರೇ ಆಗಿದ್ದಾರೆ. ಈ ಗ್ರಾಮ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿಯವರ ಸ್ವಗ್ರಾಮವೂ ಆಗಿದೆ. ಇನ್ನು ಜಗನ್ಮೋಹನ್ ರೆಡ್ಡಿಯವರು ಘಟನೆಯ ಸಂಪೂರ್ಣ ವಿವರವನ್ನು ಪಡೆದಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ತಿಳಿಸಿದ್ದಾರೆ.