ಮೈಸೂರು, ಏ. 19: ಮೈಸೂರು: ನಕಲಿ ರೆಮ್ಡಿಸಿವಿರ್ ಔಷಧ ಮಾರಾಟ ಜಾಲವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿರುವ ಮೈಸೂರು ಸಿಸಿಬಿ ಪೊಲೀಸರು, ಬಂಧಿತರಿಂದ ನಗದು ಹಾಗೂ ನಕಲಿ ಔಷಧಿ ವಶಪಡಿಸಿಕೊಂಡಿದ್ದಾರೆ.
ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯ ಸ್ಟಾಫ್ ನರ್ಸ್ ಗಿರೀಶ್ ಬಂಧಿತ ಪ್ರಮುಖ ಆರೋಪಿಯಾಗಿದ್ದು, ಈತನೊಂದಿಗೆ ಸಹಕರಿಸಿದ್ದ ಶಿವಪ್ಪ, ಮಂಗಳ, ಮಂಜುನಾಥ್ ಮತ್ತು ಪ್ರಶಾಂತ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳಿಂದ 2.82 ಲಕ್ಷ ರೂ. ನಗದು ಹಾಗೂ 800ಕ್ಕೂ ಹೆಚ್ಚು ರೆಮ್ಡಿಸಿವಿರ್ ನಕಲಿ ಔಷಧಿ ಬಾಟಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಗಿರೀಶ್, ಸೆಪ್ಟ್ರಿಯಾಕ್ಸೊನ ಎಂಬ ಆ್ಯಂಟಿಬಯೋಟಿಕ್ ಔಷಧ ಹಾಗೂ ನಾರ್ಮಲ್ ಸಲೈನ್ ಬಳಕೆ ಮಾಡಿ ನಕಲಿ ಔಷಧಿ ತಾಯರಿಸುತ್ತಿದ್ದ. ಕೇವಲ 100 ರೂ.ಗಳಿಗೆ ನಕಲಿ ರೆಮ್ಡಿಸಿವಿರ್ ಔಷಧಿ ತಯಾರಿಸಿ, ಅದನ್ನು 4 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದ. ಅಲ್ಲದೇ ತಾನು ತಯಾರಿಸಿದ ಈ ನಕಲಿ ರೆಮ್ಡಿಸಿವಿರ್ ಔಷಧಿಯನ್ನು ಕೆಲವು ಮೆಡಿಕಲ್ ರೆಪ್ರಸೆಂಟ್ಗಳ ಮೂಲಕ ಸಾರ್ವಜನಿಕರು ಹಾಗೂ ಆಸ್ಪತ್ರೆಗೂ ಸರಬರಾಜು ಮಾಡಿಸುತ್ತಿದ್ದ ಎನ್ನಲಾಗಿದೆ.
ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ರೆಮ್ಡಿಸಿವಿರ್ ಔಷಧಿಯು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ತನಿಖೆ ನಡೆಸುವಾಗ ಈ ನಕಲಿ ಜಾಲ ಪತ್ತೆಯಾಗಿದೆ ಎಂದು ನಗರ ಪೊಲೀಸ್ ಕಮೀಷನರ್ ಡಾ. ಚಂದ್ರಗುಪ್ತ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಳೆದ 11 ವರ್ಷದಿಂದ ಜೆಎಸ್ಎಸ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಗಿರೀಶ್, ಖಾಲಿಯಾಗಿದ್ದ ರೆಮ್ಡಿಸಿವಿರ್ ಔಷಧದ ಬಾಟಲಿಗೆ ಬೇರೆ ಔಷಧಿ ತುಂಬಿ ಅದನ್ನೇ ರೆಮ್ಡಿಸಿವಿರ್ ಔಷಧಿ ಎಂದು ಮಾರಾಟ ಮಾಡುತ್ತಿದ್ದ. ನಕಲಿ ಔಷಧಿಯನ್ನು ಮೆಡಿಕಲ್ ರೆಪ್ಗಳಾಗಿದ್ದ ಪ್ರಶಾಂತ್ ಮತ್ತು ಮಂಜುನಾಥ್ ಎಂಬುವವರ ಜೊತೆ ಸೇರಿ ಮಾರಾಟ ಮಾಡುತ್ತಿದ್ದ ಎನ್ನುವುದು ತನಿಖೆಯಿಂದ ಗೊತ್ತಾಗಿದೆ.