ಸಾಧಿಸುವ ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ. ಅದೇ ರೀತಿ, ಕಲಿಕೆಗೆ ವಯಸ್ಸಿಲ್ಲ. ಶ್ರದ್ದೆ ಮುಖ್ಯ ಎನ್ನುವುದಕ್ಕೆ ಇತ್ತೀಚಿಗೆ ಪುಣೆಯಲ್ಲಿ(Pune) ನಡೆದ ಘಟನೆಯೊಂದು ಪೂರಕವಾಗಿದೆ.

ಮಹಾರಾಷ್ಟ್ರ(Maharashtra) ರಾಜ್ಯ ಬೋರ್ಡ್ ಆಫ್ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಎಜುಕೇಶನ್ ನಡೆಸಿದ ವಾರ್ಷಿಕ 10ನೇ ತರಗತಿಯ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಪುಣೆಯ ನಿವಾಸಿಯಾಗಿರುವ 43 ವರ್ಷದ ಭಾಸ್ಕರ್ ಮತ್ತು ಅವರ ಮಗ ಇಬ್ಬರೂ ಈ ವರ್ಷದ 10ನೇ ತರಗತಿ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾಗಿದ್ದರು. ತಂದೆ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಮಗ ಫೇಲ್ ಆಗಿದ್ದಾನೆ!
ಈ ಘಟನೆಯ ವಿವರ ಹೀಗಿದೆ. ಭಾಸ್ಕರ್ ವಾಘಮಾರೆ ಅವರು 7 ನೇ ತರಗತಿಯ ನಂತರ ಶಿಕ್ಷಣ ಮುಂದುವರಿಸಲು ಸಾಧ್ಯವಾಗದೇ ಕುಟುಂಬವನ್ನು ಸಾಕಲು ಉದ್ಯೋಗ ಮಾಡಲಾರಂಭಿಸಿದರು.
ಮದುವೆಯಾಗಿ ಮಕ್ಕಳಾದ ನಂತರ ಅವರಿಗೆ ಮತ್ತೆ ಓದಬೇಕೆನ್ನುವ ಹಂಬಲ ಹೆಚ್ಚಾಗಿತ್ತು. ಮಗ ತನ್ನೆತ್ತರಕ್ಕೆ ಬೆಳೆದು 10ನೇ ತರಗತಿಗೆ ಬಂದಾಗ, ಅವರು ತಮ್ಮ ಆಸೆಯನ್ನು ಕುಟುಂಬದವರ ಬಳಿ ವ್ಯಕ್ತಪಡಿಸಿಸುತ್ತಾರೆ. ಏನೇನೋ ಅಡೆತಡೆಗಳು ಎದುರಾದರೂ ಹಿಂಜರಿಯದೆ, ಕೊನೆಗೆ ತಮ್ಮ ಮಗನೊಂದಿಗೆ ಈ ವರ್ಷ ಪರೀಕ್ಷೆಗೆ ಬರೆಯಲೇಬೇಕೆಂದು ನಿರ್ಧರಿಸಿ ಕಲಿಕೆ ಆರಂಭಿಸಿದರು.
ಈ ಸಾಧನೆಯ ಬಗ್ಗೆ ಭಾಸ್ಕರ್ ಅವರು ಹೀಗೆ ಹೇಳುತ್ತಾರೆ. “ನನಗೆ ಚಿಕ್ಕಂದಿನಿಂದಲೂ ಹೆಚ್ಚು ಓದಬೇಕೆನ್ನುವ ಆಸೆಯಿತ್ತು, ಆದರೆ ಕುಟುಂಬದ ಜವಾಬ್ದಾರಿಗಳಿಂದ ಮತ್ತು ಜೀವನೋಪಾಯಕ್ಕಾಗಿ ಓದನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು.

ನನ್ನ ಮಗನೂ ಈ ವರ್ಷ ಪರೀಕ್ಷೆಗೆ ಹಾಜರಾಗುತ್ತಿದ್ದದ್ದು ನನಗೆ ಸ್ಫೂರ್ತಿಯಾಯಿತು” ಎಂದು ಅವರು ಹೇಳಿದರು. ತಮ್ಮ ಮಾತನ್ನು ಮುಂದುವರಿಸಿದ ಭಾಸ್ಕರ್ “ ನಾನು ಪ್ರತಿದಿನ ಅಭ್ಯಾಸ ಮಾಡುತ್ತಿದ್ದೆ, ಇಡೀ ದಿನದ ಕೆಲಸದ ನಂತರ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ. ಸಂಜೆ ವೇಳೆ ಮಗ ಸಾಹಿಲ್ನೊಂದಿಗೆ ಕೂತು ಅಧ್ಯಯನ ಮಾಡುವಾಗ ಕೆಲವರು ಪ್ರಶಂಸಿಸಿದರೆ, ಹೆಚ್ಚಿನವರು ಹಾಸ್ಯ ಮಾಡಿ ನಕ್ಕಿದರು. ಕೊನೆಗೆ ಪರೀಕ್ಷೆ ಬರೆದು ಪಾಸ್ ಆದಾಗ ಹಾಸ್ಯ ಮಾಡಿದವರು ಆಶ್ಚರ್ಯ ಚಕಿತರಾದರು. ಈಗ ಪರೀಕ್ಷೆಯಲ್ಲಿ ತೇರ್ಗಡೆಯಾದ ಖುಷಿಯಲ್ಲಿದ್ದರೂ ಮಗ ಎರಡು ವಿಷಯಗಳಲ್ಲಿ ಫೇಲ್ ಆಗಿದ್ದಕ್ಕೆ ಬೇಸರವಾಗಿದೆ.
ನನ್ನ ಮಗನಿಗೆ ಪೂರಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ನಾನು ಬೆಂಬಲಿಸುತ್ತೇನೆ ಮತ್ತು ಅವನು ಉತ್ತೀರ್ಣನಾಗಲು ನಾನು ಸಹಾಯ ಮಾಡುತ್ತೇನೆ” ಎಂದು ಭಾಸ್ಕರ್ ಹೇಳಿದ್ದಾರೆ.