ಬೆಂಗಳೂರು,ಜೂ.25: ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕದಿರೇಶ್ ಅಕ್ಕ ಮಾಲ, ತಮ್ಮ ಸುರೇಶ್ ಹಾಗೂ ಮಾಲ ಅವರ ಮಗ ಅರೂಳ್ ಬಂಧಿತ ಆರೋಪಿಗಳು. ಇವರು ರೇಖಾ ಕದಿರೇಶ್ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ಕೊಲೆ ಮಾಡಿದ ಪೀಟರ್ ಮತ್ತು ಸೂರ್ಯ ಆರೋಪಿಗಳು ಪರಾರಿಯಾಗಿದ್ದಾರೆ. ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ರೇಖಾ ಸಮಾಜದಲ್ಲಿ ಬೇಗ ಜನಪ್ರಿಯಳಾಗುತ್ತಿದ್ದಾಳೆ. ಅವಳು ಬೆಳೆದರೆ ನಮ್ಮ ಕೈಗೆ ಸಿಗುವುದಿಲ್ಲ. ಅವಳನ್ನು ಮುಗಿಸಿಬಿಡಬೇಕು ಎಂದು ಪ್ಲಾನ್ ಮಾಡಿ ಹತ್ಯೆಗೆ ಸುಪಾರಿ ನೀಡಿದ್ದರು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.
ಕದಿರೇಶ್ ಮರಣದ ನಂತರ ಕದಿರೇಶ್ ಕುಟುಂಬಸ್ಥರು ಸಾಕಷ್ಟು ನೋವು ಅನುಭವಿಸಿದ್ದರು. ಕದಿರೇಶ್ ಸಂಪಾದನೆ ಮಾಡಿದ್ದ ಆಸ್ತಿ, ರಾಜಕೀಯ ಸ್ಥಾನಮಾನ ಎಲ್ಲವೂ ಕದಿರೇಶ್ ಪತ್ನಿ ರೇಖಾಗೆ ಸಿಕ್ಕಿತ್ತು. ಇದಾದ ಬಳಿಕ ರೇಖಾ ಅವರು ಕದಿರೇಶ್ ಕುಟುಂಬದವರನ್ನು ಮೂಲೆಗುಂಪು ಮಾಡಿದ್ದಾರೆ. ಯಾವುದೇ ನೆರವು ನೀಡುತ್ತಿರಲಿಲ್ಲ ಎಂದು ಕುಟುಂಬದವರು ಬೇಸತ್ತು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.