ಬೆಂಗಳೂರು, ಮಾ. 29: ದಿನಕ್ಕೊಂದು ತಿರುವು ಪಡೆಯುತ್ತಿರುವ ಮಾಜಿ ಸಚಿವ ರಮೇಶ್ ರಾಸಲೀಲೆ ಪ್ರಕರಣ ಕಡೆಗೂ ನ್ಯಾಯಾಲಯದ ಮೆಟ್ಟಿಲೇರಿದೆ. ಇದರ ಬೆನ್ನಲ್ಲೇ ಸಿಡಿ ಬಿಡುಗಡೆ ಆದ ದಿನದಿಂದಲೂ ಅಜ್ಞಾತ ಸ್ಥಳದಲ್ಲಿರುವ ಸಿಡಿ ಲೇಡಿ ಇಂದು ಅಥವಾ ನಾಳೆ ಕೋರ್ಟ್ಗೆ ಹಾಜರಾಗುವ ಎಲ್ಲಾ ಸಾಧ್ಯತೆಗಳಿವೆ.
ಇದಕ್ಕೆ ಪೂರಕವಾಗಿ ಪ್ರತಿಕ್ರಿಯೆ ನೀಡಿರುವ ಯುವತಿ ಪರ ವಕೀಲ ಕೆ.ಎನ್. ಜಗದೀಶ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆದೇಶಿಸಿದರೆ ಇಂದೇ ಯುವತಿಯನ್ನು ಹಾಜರುಪಡಿಸುತ್ತೇವೆ. ಮನವಿ ಆಧರಿಸಿ ನ್ಯಾಯಾಲಯ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲಿದ್ದು, ಆ ಬಳಿಕ ಯುವತಿಯನ್ನು ಕೋರ್ಟ್ಗೆ ಹಾಜರುಪಡಿಸಲು ಸೂಚಿಸುತ್ತದೆ ಎಂದು ವಕೀಲ ಜಗದೀಶ್ ಹೇಳಿದ್ದಾರೆ.
ಅಲ್ಲದೇ, ನನ್ನ ಕಕ್ಷಿದಾರರಾದ ಸಂತ್ರಸ್ತೆಯ ದೂರಿನ ಆಧಾರದಲ್ಲಿ ಮಾತ್ರವೇ ನಮ್ಮ ವಕೀಲರ ತಂಡ ಕಾನೂನಾತ್ಮಕ ಪ್ರಕ್ರಿಯೆಗೆ ಮುಂದಾಗಿದೆ. ಅವರನ್ನು ನಾವು ಓರ್ವ ಲೈಂಗಿಕ ದೌರ್ಜನ್ಯ ಸಂತ್ರಸ್ತೆಯಾಗಿ ಪರಿಗಣಿಸಿದ್ದೇವೆ. ರಾಜಕೀಯ ಒತ್ತಡಗಳ ವಿಚಾರ ಉದ್ಭವಿಸುವುದಿಲ್ಲ ಎಂದು ಸಿಡಿ ಪ್ರಕರಣದ ಸಂತ್ರಸ್ತೆಯ ಪರ ವಕೀಲ ಜಗದೀಶ್ ಕುಮಾರ್ ಹೇಳಿದ್ದಾರೆ.