- ನಗರದ ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್ ಅಡ್ಡಿಯಾಗುತ್ತಿರುವ (GBA action against unauthorized parking) ಹಿನ್ನೆಲೆ ಕಠಿಣ ಕ್ರಮಕ್ಕೆ ಮುಂದಾದ ಸಂಚಾರ ಪೊಲೀಸರು
- ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದರೆ ದಂಡ ಮಾತ್ರವಲ್ಲ, ನೇರವಾಗಿ ಟೋಯಿಂಗ್ ಸಾಧ್ಯತೆ
- ರಸ್ತೆಯೇ ಪಾರ್ಕಿಂಗ್ ಯಾರ್ಡ್: ವರ್ಷಗಳಿಂದ ನಿಲ್ಲಿಸಿರುವ ವಾಹನಗಳ ವಿರುದ್ಧ ಕ್ರಮ
Bengaluru: ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಟ್ರಾಫಿಕ್ ಸಮಸ್ಯೆಗೆ (GBA action against unauthorized parking) ಪ್ರಮುಖ ಕಾರಣಗಳಲ್ಲಿ ಒಂದಾಗಿ ಅನಧಿಕೃತ ಪಾರ್ಕಿಂಗ್ ದೊಡ್ಡ ತಲೆನೋವಾಗಿಯೇ ಪರಿಣಮಿಸಿದೆ.
ಜನಸಂಖ್ಯೆಗೆ ಹೋಲಿಸಿದರೆ ವಾಹನಗಳ ಸಂಖ್ಯೆ ಅತಿಯಾಗಿ ಹೆಚ್ಚಿರುವ ನಗರದಲ್ಲಿ, ರಸ್ತೆಗಳನ್ನು ಸರಿಯಾಗಿ ಬಳಸದೆ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವ ಪ್ರವೃತ್ತಿ ಸಂಚಾರ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. ಇದರಿಂದ ಸಾಮಾನ್ಯ ನಾಗರಿಕರಿಗೆ ಮಾತ್ರವಲ್ಲದೆ ಸಂಚಾರ ಪೊಲೀಸರಿಗೆ ಸಹ ವಾಹನ ನಿಯಂತ್ರಣ ಕಷ್ಟಕರವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ನಗರದಲ್ಲಿ ಮತ್ತೆ ಟೋಯಿಂಗ್ ವ್ಯವಸ್ಥೆಯನ್ನು ಜಾರಿಗೆ (GBA action against unauthorized parking) ತರಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಸಂಚಾರ ಪೊಲೀಸ್ ಇಲಾಖೆ ನಿರ್ಧಾರ ಕೈಗೊಂಡಿವೆ.
ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಅನಧಿಕೃತ ಪಾರ್ಕಿಂಗ್ ನಿಯಂತ್ರಣಕ್ಕೆ ಸವಾಲಾಗುತ್ತಿದೆ. ವ್ಯಾಪಾರಿಕ ಪ್ರದೇಶಗಳು, ಜನವಸತಿ ಪ್ರದೇಶಗಳು, ಶಾಲೆ-ಕಾಲೇಜುಗಳ ಸುತ್ತಮುತ್ತ ಹಾಗೂ ಮುಖ್ಯ ರಸ್ತೆಗಳಲ್ಲೂ ಬೇಕಾಬಿಟ್ಟಿ ವಾಹನ ನಿಲ್ಲಿಸಲಾಗುತ್ತಿದೆ.
ಇದರಿಂದ ರಸ್ತೆ ಅಗಲ ಕಡಿಮೆಯಾಗಿ ಟ್ರಾಫಿಕ್ ಜಾಮ್ (Traffic Jam) ಹೆಚ್ಚಾಗುತ್ತಿದೆ. ತುರ್ತು ಸೇವೆಗಳ ವಾಹನಗಳು ಕೂಡ ಸುಗಮವಾಗಿ ಸಂಚರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಸಾಕಷ್ಟು ಬಾರಿ ದಂಡ ವಿಧಿಸಿದರೂ ನಿಯಮ ಉಲ್ಲಂಘನೆ ಮುಂದುವರಿದಿರುವುದರಿಂದ, ಕಠಿಣ ಕ್ರಮವಾಗಿ ಟೋಯಿಂಗ್ (Towing) ಅಸ್ತ್ರವನ್ನು ಮತ್ತೆ ಬಳಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಇನ್ನು ರಾಜಾಜಿನಗರ ವೆಸ್ಟ್ ಆಫ್ ಕಾರ್ಡ್ ರಸ್ತೆ, ಶಿವನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆಗಳು ಪಾರ್ಕಿಂಗ್ ಸ್ಥಳಗಳಾಗಿ ಮಾರ್ಪಟ್ಟಿವೆ.
ಕೆಲವೊಂದು ವಾಹನಗಳನ್ನು ವರ್ಷಗಳ ಹಿಂದೆಯೇ ನಿಲ್ಲಿಸಲಾಗಿದ್ದು, ಅವುಗಳ ಮಾಲೀಕರು ಮತ್ತೆ ನೋಡಲು ಕೂಡ ಬಂದಿಲ್ಲ ಎನ್ನಲಾಗಿದೆ.
ಧೂಳು ಹಿಡಿದು, ತುಕ್ಕು ಹಿಡಿದ ವಾಹನಗಳು ರಸ್ತೆಯಲ್ಲೇ ಬಿದ್ದಿದ್ದು, ಸ್ಕ್ರಾಪ್ ಆಗಬೇಕಾದ ವಾಹನಗಳಿಗೂ ಇದೇ ಆಶ್ರಯವಾಗಿದೆ. ಸ್ಥಳೀಯರು ಪಾಲಿಕೆ ಮತ್ತು ಪೊಲೀಸರಿಗೆ ದೂರು ನೀಡಿದರೂ ಪರಿಣಾಮಕಾರಿ ಕ್ರಮ ಕಂಡುಬಂದಿಲ್ಲ ಎಂದು ಆರೋಪಿಸಿದ್ದಾರೆ.
ಇದೇ ರೀತಿ ಮಲ್ಲೇಶ್ವರಂ 8ನೇ ಮುಖ್ಯರಸ್ತೆಯಂತಹ ಜನವಸತಿ ಪ್ರದೇಶಗಳೂ ಅನಾಮಿಕ ವಾಹನಗಳ ಪಾರ್ಕಿಂಗ್ ಹಾಟ್ಸ್ಪಾಟ್ ಆಗಿವೆ.
2019ರಲ್ಲಿ ನಿಲ್ಲಿಸಲಾದ ಕೆಲವು ವಾಹನಗಳು ಇಂದಿಗೂ ಅಲ್ಲಿಯೇ ನಿಂತಿರುವುದು ಆಶ್ಚರ್ಯ ಮೂಡಿಸಿದೆ. ಇವುಗಳಿಂದ ನಿವಾಸಿಗಳಿಗೆ ದಿನನಿತ್ಯದ ಸಂಚಾರದಲ್ಲಿ ತೀವ್ರ ತೊಂದರೆ ಉಂಟಾಗುತ್ತಿದೆ.
ರಸ್ತೆಗಳು ಕಿರಿದಾಗಿರುವುದರಿಂದ ವಾಹನ ಸವಾರರು ಪರದಾಡುವ ಸ್ಥಿತಿ ಎದುರಾಗಿದೆ. ಈ ಎಲ್ಲಾ ಕಾರಣಗಳಿಂದ ಟೋಯಿಂಗ್ ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸುವುದು ಅಗತ್ಯ ಮತ್ತು ಸಮಯೋಚಿತ ಕ್ರಮ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟೋಯಿಂಗ್ ಪುನರಾರಂಭದ ನಿರ್ಧಾರಕ್ಕೆ ಮತ್ತೊಂದು ಹಿನ್ನೆಲೆಯೂ ಇದೆ. ಇತ್ತೀಚೆಗೆ ಜಾಗತಿಕ ಮಟ್ಟದಲ್ಲೇ ಬೆಂಗಳೂರು ಟ್ರಾಫಿಕ್ ಸಮಸ್ಯೆಗಾಗಿ ಸುದ್ದಿಯಾಗಿತ್ತು.
ನೆದರ್ಲೆಂಡ್ಸ್ ಮೂಲದ ‘ಟಾಮ್ಟಾಮ್’ ಸಂಸ್ಥೆ ಬಿಡುಗಡೆ ಮಾಡಿದ 2025ರ ಸಂಚಾರ ಸೂಚ್ಯಂಕ ವರದಿಯಲ್ಲಿ, ಟ್ರಾಫಿಕ್ ದಟ್ಟಣೆಯಲ್ಲಿ ಬೆಂಗಳೂರು ವಿಶ್ವದಲ್ಲೇ 2ನೇ ಸ್ಥಾನ ಪಡೆದಿದೆ. 2025ರಲ್ಲಿ ನಗರದಲ್ಲಿನ ಸರಾಸರಿ ಸಂಚಾರ ದಟ್ಟಣೆ ಶೇ.74.4ಕ್ಕೆ ಏರಿಕೆಯಾಗಿದೆ.
2024ರಿಗಿಂತ ಶೇ.1.7ರಷ್ಟು ಹೆಚ್ಚಳ ಕಂಡುಬಂದಿರುವುದು ಆತಂಕಕಾರಿ ಬೆಳವಣಿಗೆ ಎಂದು ವರದಿ ತಿಳಿಸಿದೆ. ಅಧಿಕಾರಿಗಳ ಪ್ರಕಾರ, ಟೋಯಿಂಗ್ ಜಾರಿಯಿಂದ ಪ್ರಮುಖ ರಸ್ತೆಗಳು, ಜಂಕ್ಷನ್ಗಳು ಮತ್ತು ಸಂಚಾರ ದಟ್ಟಣೆಯ ಪ್ರದೇಶಗಳಲ್ಲಿ ನಿಯಂತ್ರಣ ಸಾಧ್ಯವಾಗಲಿದೆ.
ಸಾರ್ವಜನಿಕರು ನಿಯಮ ಪಾಲನೆ ಮಾಡಿದರೆ ಮಾತ್ರ ದೀರ್ಘಕಾಲಿಕವಾಗಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
