- ಬೆಂಗಳೂರಿನಲ್ಲಿ ಅಕ್ರಮ ಬ್ಯಾನರ್ಗಳಿಗೆ (GBA removing illegal banners ) ಬ್ರೇಕ್ ಹಾಕಿದ ಜಿಬಿಎ
- ಡಿಸಿಎಂ ಡಿಕೆ ಶಿವಕುಮಾರ್ ಸೂಚನೆಯಂತೆ ಅನಧಿಕೃತ ಬ್ಯಾನರ್ ಹಾಗೂ ಹೋರ್ಡಿಂಗ್ಗಳ ತೆರವುಗೊಳಿಸಿದ ಜಿಬಿಎ
- ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಇಲ್ಲದೆ ಅಳವಡಿಸಿದ ಫ್ಲೆಕ್ಸ್ಗಳಿಗೆ ದಂಡ ಮತ್ತು ಕಾನೂನು ಕ್ರಮದ ಎಚ್ಚರಿಕೆ
Bengaluru: ಬಳ್ಳಾರಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಇತ್ತೀಚೆಗೆ ನಡೆದ ಬ್ಯಾನರ್ (Banner) ಗಲಾಟೆಗಳ ಹಿನ್ನೆಲೆಯಲ್ಲಿ (GBA removing illegal banners) ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಇದೀಗ ಕಠಿಣ ಕ್ರಮಕ್ಕೆ ಮುಂದಾಗಿದೆ.
ರಾಜಧಾನಿ ಬೆಂಗಳೂರಿನಾದ್ಯಂತ ಅನಧಿಕೃತವಾಗಿ ಅಳವಡಿಸಲಾಗಿದ್ದ ಬ್ಯಾನರ್ಗಳು, ಫ್ಲೆಕ್ಸ್ಗಳು (Flex) ಹಾಗೂ ಹೋರ್ಡಿಂಗ್ಗಳನ್ನು (Hoarding) ತೆರವುಗೊಳಿಸುವ ಕಾರ್ಯವನ್ನು ಜಿಬಿಎ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ.

ನಗರದ ಪ್ರಮುಖ ಜಂಕ್ಷನ್ಗಳು (Junction) , ಸ್ಕೈವಾಕ್ಗಳು, ಬಸ್ ಶೆಲ್ಟರ್ಗಳ ಸುತ್ತಮುತ್ತ ಅಕ್ರಮವಾಗಿ ಅಳವಡಿಸಲಾದ ಫ್ಲೆಕ್ಸ್ಗಳು ಸಾರ್ವಜನಿಕ ಸುರಕ್ಷತೆಗೆ ಅಪಾಯ ಉಂಟುಮಾಡುತ್ತಿದ್ದು, ನಗರದ ಸೌಂದರ್ಯವನ್ನೂ ಹಾಳು ಮಾಡುತ್ತಿವೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ಆರಂಭವಾಗಿದೆ.
ಡಿಸಿಎಂ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರಾಗಿರುವ ಡಿಕೆ ಶಿವಕುಮಾರ್ (D.K.Shivakumar) ಅವರ ಸೂಚನೆಯಂತೆ ಈ ತೆರವು ಕಾರ್ಯಕ್ಕೆ ವೇಗ ನೀಡಲಾಗಿದೆ.
ನಗರದ ವಿವಿಧ ಭಾಗಗಳಲ್ಲಿ ಜಿಬಿಎ ಅಧಿಕಾರಿಗಳು (GBA removing illegal banners) ಹಂತ ಹಂತವಾಗಿ ಪರಿಶೀಲನೆ ನಡೆಸಿ ಅಕ್ರಮ ಫ್ಲೆಕ್ಸ್ಗಳನ್ನು ತೆರವುಗೊಳಿಸಿದ್ದಾರೆ.
ಶಾಂತಿನಗರ ವಿಭಾಗದಲ್ಲಿ ಏಳು, ಸಿ.ವಿ.ರಾಮನ್ ನಗರದಲ್ಲಿ ಆರು, ಶಿವಾಜಿನಗರದಲ್ಲಿ ಹದಿಮೂರು, ಚಿಕ್ಕಪೇಟೆ (Chikkapete) ಪ್ರದೇಶದಲ್ಲಿ ಇಪ್ಪತ್ತೆರಡು ಹಾಗೂ ಗಾಂಧಿನಗರದಲ್ಲಿ ಮೂರು ಹೋರ್ಡಿಂಗ್ಗಳನ್ನು ತೆರವು ಮಾಡಲಾಗಿದೆ.
ಈ ಕಾರ್ಯಾಚರಣೆ ವೇಳೆ ಯಾವುದೇ ಪೂರ್ವಾನುಮತಿ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾದ ಬ್ಯಾನರ್ಗಳನ್ನು ಗುರುತಿಸಿ ತೆಗೆದುಹಾಕಲಾಗಿದೆ.
ಇದರಿಂದಾಗಿ ಸಾರ್ವಜನಿಕ ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಅನೇಕ ಅಡ್ಡಿಗಳು ನಿವಾರಣೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಪ್ರದೇಶಗಳಲ್ಲಿ ಈ ಕಾರ್ಯ ಮುಂದುವರಿಯಲಿದೆ ಎಂದು ಜಿಬಿಎ ಮೂಲಗಳು ಸ್ಪಷ್ಟಪಡಿಸಿವೆ.
ಇದೇ ವೇಳೆ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆ ವಿಶೇಷ ಗಮನ ಸೆಳೆದಿದೆ.
ಈ ಭಾಗದಲ್ಲಿ ಒಟ್ಟು 473 ಅನಧಿಕೃತ ಫ್ಲೆಕ್ಸ್ಗಳು ಮತ್ತು ಬ್ಯಾನರ್ಗಳನ್ನು ತೆರವುಗೊಳಿಸಲಾಗಿದ್ದು, ನಿಯಮ ಉಲ್ಲಂಘನೆ ಮಾಡಿದವರಿಂದ 15,000 ರೂಪಾಯಿ ದಂಡವನ್ನು ವಸೂಲಿ ಮಾಡಲಾಗಿದೆ.
ಇದುವರೆಗೂ ಅಧಿಕಾರಿಗಳು ಕೇವಲ ನೋಟಿಸ್ (Notice) ನೀಡುವ ಮಟ್ಟಿಗೆ ಸೀಮಿತವಾಗಿದ್ದ ಕ್ರಮ, ಇದೀಗ ನೇರ ದಂಡ ಹಾಗೂ ಕಾನೂನು ಕ್ರಮದತ್ತ ಸಾಗುತ್ತಿರುವುದು ಸ್ಪಷ್ಟವಾಗಿದೆ.
ನಗರದಲ್ಲಿ ಹೆಚ್ಚುತ್ತಿರುವ ಅನಧಿಕೃತ ಜಾಹೀರಾತು ಸಂಸ್ಕೃತಿಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಬಿಎ ಅಧಿಕಾರಿಗಳು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್, “ನಗರದ ಜಂಕ್ಷನ್ಗಳು (Junction) ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಬ್ಯಾನರ್ಗಳು ಮತ್ತು ಫ್ಲೆಕ್ಸ್ಗಳು ಅಪಾರ ಪ್ರಮಾಣದಲ್ಲಿ ಹೆಚ್ಚಾಗಿವೆ. ಇವು ನಗರ ನೋಟವನ್ನು ಹಾಳು ಮಾಡುವುದಷ್ಟೇ ಅಲ್ಲದೆ, ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಗಂಭೀರ ಸುರಕ್ಷತಾ ಅಪಾಯವನ್ನುಂಟುಮಾಡುತ್ತವೆ. ಇಂತಹ ಪ್ರಕರಣಗಳನ್ನು ಇನ್ನು ಮುಂದೆ ಹಗುರವಾಗಿ ಪರಿಗಣಿಸಲಾಗುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂಬುದು ಅವರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಜಿಬಿಎ ಅಧಿಕಾರಿಗಳಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಲಾಗಿದೆ.
ಮುಂದಿನ ದಿನಗಳಲ್ಲಿ ಅನುಮೋದನೆಯಿಲ್ಲದೆ ಬ್ಯಾನರ್ಗಳು ಮತ್ತು ಫ್ಲೆಕ್ಸ್ಗಳನ್ನು ಅಳವಡಿಸುವ ವ್ಯಕ್ತಿಗಳು, ಸಂಘಟನೆಗಳು ಹಾಗೂ ಸಂಸ್ಥೆಗಳ ವಿರುದ್ಧ ನೇರವಾಗಿ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಜಿಬಿಎ ಈಗಾಗಲೇ ಎಚ್ಚರಿಕೆ ನೀಡಿದೆ.
ಕೇವಲ ದಂಡ ವಿಧಿಸುವ ಮೂಲಕ ಸಮಸ್ಯೆ ಪರಿಹಾರವಾಗುವುದಿಲ್ಲ ಎಂಬ ಕಾರಣದಿಂದ ಕಾನೂನು ಕ್ರಮಕ್ಕೆ ಒತ್ತು ನೀಡಲಾಗಿದೆ.
ಈ ಮೂಲಕ ಪುನರಾವರ್ತಿತ ನಿಯಮ ಉಲ್ಲಂಘನೆಗಳಿಗೆ ತಡೆ ಬೀಳಲಿದೆ ಎಂಬ ನಿರೀಕ್ಷೆಯನ್ನು ಜಿಬಿಎ ಹೊಂದಿದೆ.
ನಗರವನ್ನು ಶಿಸ್ತುಬದ್ಧವಾಗಿ, ಸುರಕ್ಷಿತವಾಗಿ ಹಾಗೂ ಸೌಂದರ್ಯಯುತವಾಗಿ ಉಳಿಸುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ಮುಂದುವರಿಯಲಿದೆ.
ಇದನ್ನು ಓದಿ : https://vijayatimes.com/gba-elections-preparation/