ಮೈಸೂರು, ಜ. 19: ಜೆಡಿಎಸ್ ನಾಯಕರಲ್ಲಿ ಅಸಮಾಧಾನ ಇರುವುದು ಮತ್ತೊಮ್ಮೆ ಸಾಬೀತಾಗಿದೆ. ಕಳೆದ ಹಲವು ದಿನಗಳಿಂದಲೂ ಸ್ಥಳೀಯ ನಾಯಕರ ನಡುವೆ ನಡೆಯುತ್ತಿದ್ದ ಶಾಸಕ ಜಿ.ಟಿ. ದೇವೇಗೌಡ ಹಾಗೂ ಜೆಡಿಎಸ್ ವರಿಷ್ಠರ ನಡುವಿನ ಮುಸುಕಿನ ಗುದ್ದಾಟ ಇದೀಗ ಬಹಿರಂಗವಾಗಿದೆ.
ಸಂಕ್ರಾಂತಿ ಬೆನ್ನಲ್ಲೇ ಪಕ್ಷಕ್ಕೆ ಹೊಸ ಹುರುಪು ನೀಡುವ ನಿಟ್ಟಿನಲ್ಲಿ ದಿಟ್ಟಹೆಜ್ಜೆ ಇಟ್ಟಿರುವ ಜೆಡಿಎಸ್ ನಾಯಕರು ಇದಕ್ಕಾಗಿ ತಮ್ಮದೇ ರಣತಂತ್ರ ರೂಪಿಸಿಕೊಳ್ಳಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕರ ಬಗ್ಗೆ ಹಲವು ಸಂದರ್ಭಗಳಲ್ಲಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಶಾಸಕ ಜಿ.ಟಿ. ದೇವೇಗೌಡರಿಂದ ಅಂತರ ಕಾಯ್ದುಕೊಳ್ಳಲು ಜೆಡಿಎಸ್ ನಾಯಕರು ತೀರ್ಮಾನಿಸಿದಂತಿದೆ.
ಇದಕ್ಕೆ ಪೂರಕವೆಂಬಂತೆ ಜೆಡಿಎಸ್ ವಿಭಾಗಗಳ ವೀಕ್ಷಕರುಗಳ ಪಟ್ಟಿ ಬಿಡುಗಡೆ ಮಾಡಿರುವ ಜೆಡಿಎಸ್, ಮೈಸೂರು ಭಾಗದ ಹಿರಿಯ ನಾಯಕ ಹಾಗೂ ಜೆಡಿಎಸ್ ಶಾಸಕ ಜಿಟಿಡಿ ಅವರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಜಿಟಿಡಿ ಹೊರತುಪಡಿಸಿ ಹಳೇ ಮೈಸೂರು ಪ್ರಾಂತ್ಯದ ಉಳಿದೆಲ್ಲ ಶಾಸಕರು, ಪ್ರಮುಖರಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ನೀಡಲಾಗಿದೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್. ಡಿ.ದೇವೆಗೌಡ ಮತ್ತು ರಾಜ್ಯಾಧ್ಯಕ್ಷ ಕುಮಾರಸ್ವಾಮಿ ನೇತೃತ್ವದಲ್ಲಿ ವಿಭಾಗಗಳ ವೀಕ್ಷಕರ ನೇಮಕ ಮಾಡಲಾಗಿದೆ. ಆದರೆ ಪಟ್ಟಿಯಲ್ಲಿ ಉದ್ಧೇಶ ಪೂರ್ವಕವಾಗಿ ಜಿಟಿಡಿ ಹೆಸರನ್ನು ಕೈಬಿಟ್ಟಿರುವುದು ಸ್ಪಷ್ಟವಾಗಿದೆ. ಹೀಗಾಗಿ ಜೆಡಿಎಸ್ ನಾಯಕರು ಮತ್ತು ಜಿಟಿ ದೇವೆಗೌಡರ ನಡುವೆ ಎಲ್ಲವು ಸರಿಯಿಲ್ಲ ಅನ್ನೊದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
ಕೆಲ ದಿನಗಳ ಹಿಂದಷ್ಟೇ ಪಕ್ಷದ ಪರ ಇಲ್ಲದವರನ್ನ ಮೈಸೂರಿನಿಂದಲೇ ಉಚ್ಚಾಟಿಸುವುದಾಗಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಇದೀಗ ವೀಕ್ಷಕರ ಪಟ್ಟಿಯಿಂದ ಕೈಬಿಡುವ ಮೂಲಕ ಜಿಟಿಡಿಯನ್ನು ಪಕ್ಷದಿಂದ ಉಚ್ಚಾಟಿಸೋ ಮೂನ್ಸೂಚನೆ ತೋರಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಮೈಸೂರು ವಿಭಾಗದ ವೀಕ್ಷಕರುಗಳಾಗಿ ಶಾಸಕರಾದ ಹೆಚ್ ಡಿ ರೇವಣ್ಣ,ಸಾರ ಮಹೇಶ್, ಪುಟ್ಟರಾಜು, ಅಶ್ವಿನ್ ಕುಮಾರ್, ಅನ್ನದಾನಿ, ಮಾಜಿ ಶಾಸಕ ಚಿಕ್ಕಣ್ಣ, ನಿಖಿಲ್ ಕುಮಾರಸ್ವಾಮಿ, ಮೊಹಮ್ಮದ್ ಜಫ್ರುಲ್ಲಖಾನ್, ಅಬ್ದುಲ್ ಅಜೀಜ್ ಅಬ್ದುಲ್ಲ ಅವರನ್ನು ನೇಮಿಸಲಾಗಿದೆ.