ಬೆಂಗಳೂರು ನ 20 : ಪೇಜಾವರ ಶ್ರೀಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪ ಪ್ರಕರಣ ಸಂಬಂಧ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಪೊಲೀಸರು ಎರಡನೇ ನೋಟಿಸ್ ನೀಡಿದ್ದಾರೆ.
ಹಂಸಲೇಖ ಅವರು ಪೇಜಾವರ ಶ್ರೀಗಳ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ವಿಪ್ರ ಯುವ ವೇದಿಕೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಹಂಸಲೇಖ ಅವರಿಗೆ ನೋಟಿಸ್ ನೀಡಿದ್ದರು. ಆದರೆ ಅವರು ಪೊಲೀಸರ ಸಂಪರ್ಕಕ್ಕೆ ಸಿಗದೇ, ವಿಚಾರಣೆಗೆ ಗೈರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಎರಡನೇ ನೋಟಿಸ್ ನೀಡಿದ್ದಾರೆ.
ವಿವಾದ ಹಿನ್ನಲೆ : ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಹಂಸಲೇಖ ಅವರು, ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿದ್ರು ಅಂತ ಕೇಳಿದ್ದೆ. ದಲಿತರ ಮನೆಗೆ ಬಂದು ಅವರು ಕುಳಿತುಕೊಳ್ಳಬಹುದು. ಆದ್ರೆ, ಅವರಿಗೆ ಕೋಳಿ ಕೊಟ್ಟರೆ ತಿನ್ನೋಕೆ ಆಗುತ್ತಾ..? ಕೋಳಿ ಬೇಡ ಕುರಿಯ ರಕ್ತವನ್ನು ಫ್ರೈ ಮಾಡಿ ಕೊಟ್ರೆ ತಿನ್ನೋಕೆ ಆಗುತ್ತಾ..? ಲಿವರ್ ಕೊಟ್ರೆ ತಿನ್ನೋಕೆ ಆಗುತ್ತಾ..? ಎಂದು ಪ್ರಶ್ನಿಸಿದ್ದರು.
ಹಂಸಲೇಖ ಅವರ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಅತೀವ ಪರ-ವಿರೋಧಗಳ ಚರ್ಚೆಯ ನಂತರ ಹಂಸಲೇಖ ಅವರು ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೇಳಿದ್ದರು.