ಬೆಂಗಳೂರು, ಫೆ. 13: ಹಲವು ಸಂದರ್ಭಗಳಲ್ಲಿ ಸರ್ಕಾರ ಹಾಗೂ ಬಿಜೆಪಿ ನಾಯಕರ ವಿರುದ್ಧ ಮಾತಿನ ಚಾಟಿ ಬೀಸುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಕ್ರಮಕ್ಕೆ ಮುಂದಾಗಿರುವ ಹೈಕಮಾಂಡ್ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಶೋಕಾಸ್ ನೋಟಿಸ್ ಜಾರಿ ಮಾಡಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ಸಿಂಗ್, 15 ದಿನದಲ್ಲಿ ನೋಟೀಸ್ಗೆ ಉತ್ತರಿಸುವಂತೆ ಸೂಚನೆ ಕೂಡ ಇದೆ. ಸರ್ಕಾರದ ವಿರುದ್ಧ ಹಾಗೂ ಸಿಎಂ ವಿರುದ್ಧ ನೀಡಿದ್ದ ಹೇಳಿಕೆ ನೀಡಿ ಸರ್ಕಾರಕ್ಕೆ ಮುಜುಗರ ತಂದ ಕಾರಣ ನೋಟಿಸ್ ನೀಡಿದೆ.
ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಯತ್ನಾಳ್ಗೆ ಸಿಎಂ ಯಡಿಯೂರಪ್ಪ ಅವರು ಯಾವುದೇ ಖಾತೆ ನೀಡಿಲ್ಲ. ಈ ವಿಚಾರದಲ್ಲಿ ತೀವ್ರ ಅಸಮಾಧಾನಗೊಂಡಿದ್ದ ಯತ್ನಾಳ್ ಸಿಎಂ ಮತ್ತು ಪಕ್ಷದ ವಿರುದ್ಧ ಬಹಿರಂಗವಾಗಿಯೇ ಸಾಕಷ್ಟು ವಾಗ್ದಾಳಿ ನಡೆಸಿದ್ದರು.
ಅಲ್ಲದೇ, ಸಿಎಂ ಬಿಎಸ್ ವೈ ಅವರಿಗೆ ಲಿಂಗಾಯತರಿಗೆ ಹಿಂದುಳಿದ ವರ್ಗದ ಸ್ಥಾನಮಾನ ನೀಡಬೇಕು ಅನ್ನೋ ವಿಚಾರವಿಲ್ಲ. ಕೇಂದ್ರ ನಾಯಕರನ್ನು ಹೆದರಿಸಲು ಬಿಎಸ್ ವೈ ಅವರಿಗೆ ವೀರಶೈವ ಲಿಂಗಾಯತ ಬೇಕು. ಕುರ್ಚಿ ಅಲ್ಲಾಡ್ತಾ ಇದ್ದಾಗ ಅವರಿಗೆ ವೀರಶೈವ- ಲಿಂಗಾಯತ ನೆನಪಾಗಿದ್ದಾರೆ. ಎಂಟು ಲಿಂಗಾಯತ ಶಾಸಕರ ಕ್ಯಾಬಿನೆಟ್ ಕರೆದು ಏಕಾಏಕಿ ನಿಗಮ ಮಂಡಳಿ ಮಾಡಿದ್ದಾರೆ ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದರು.