ಚಿಕ್ಕಮಗಳೂರು ಸೆ 1 : ದಲಿತ ಯುವಕನಿಗೆ ಮೂತ್ರ ಕುಡಿಸಿ ಆರೋಪದಡಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಅರ್ಜುನ್ ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಕಿರಗುಂದ ಗ್ರಾಮದ ಮಹಿಳೆಯೊಬ್ಬಳು ಕಾಣೆಯಾಗಿರುವ ಪ್ರಕರಣ ಸಂಬಂಧ ಸಬ್ ಇನ್ಸಪೆಕ್ಟರ್ ಅರ್ಜುನ್, ದಲಿತ ಯುವಕ ಪುನೀತ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಪುನೀತ್ ನೀರು ಕೇಳಿದಾಗ ಬೇರೊಬ್ಬ ಆರೋಪಿಯ ಮೂತ್ರ ಕುಡಿಸಿದ್ದರು ಎಂದು ಪುನೀತ್ ಅರ್ಜುನ್ ಅವರ ಮೇಲೆ ಗಂಭೀರ ಆರೋಪ ಮಾಡಿದ್ದರು. ವಿಚಾರಣೆ ಬಳಿಕ ಪಿಎಸ್ಐ ವಿರುದ್ದ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗಿತ್ತು. ಮೂತ್ರ ಕುಡಿಸಿದ ಆರೋಪದಡಿ ಪಿ.ಎಸ್.ಐ. ಅರ್ಜುನ್ ಮೇಲೂ ಕೇಸ್ ದಾಖಲಾಗಿತ್ತು. ಸರ್ಕಾರ ಪ್ರಕರಣದ ತನಿಖೆಯನ್ನ ಸಿಐಡಿ ಹೆಗಲಿಗೆ ಹಾಕಿತ್ತು. ಸೆ 1ರಂದು ಬೆಂಗಳೂರಿನಲ್ಲಿ ಪಿಎಸ್ಐ. ಅರ್ಜುನ್ ಅವರನ್ನು ಬಂಧಿಸಿದ ಸಿ.ಐ.ಡಿ. ಪೊಲೀಸರು ಇಂದು ಚಿಕ್ಕಮಗಳೂರು ಕೋರ್ಟ್ಗೆ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಧೀಶೆ ಪುಷ್ಪಾಂಜಲಿ ಅವರು ಆರೋಪಿ ಅರ್ಜುನ್ ಅವರನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡೆಸಲು ಆದೇಶಿಸಿದ್ದಾರೆ.