ಮುಂಬೈ, ನ.03: ಕರ್ಮವೀರ್ ಎಂಬ ವಿಶೇಷ ಸಂಚಿಕೆಯಲ್ಲಿ ಬಿಗ್ ಬಿ ಕೇಳಿದ ಪ್ರಶ್ನೆಯೊಂದಕ್ಕೆ ಎಫ್ಐಆರ್ ದಾಖಲಾಗಿದೆ. ಕೆಬಿಸಿ ನಿರೂಪಕ ಬಿಗ್ ಬಿ ಅಮಿತಾಭ್ ಬಚ್ಚನ್ ಹಾಗೂ ಸೋನಿ ಟಿವಿ ಕಾರ್ಯಕ್ರಮದ ಮೇಕರ್ಸ್ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ.
ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ ಶುಕ್ರವಾರ ನಟ ಅನುಪ್ ಸೋನಿ ಮತ್ತು ಸಾಮಾಜಿಕ ಕಾರ್ಯಕರ್ತ ಬೆಜ್ವಾಡಾ ವಿಲ್ಸನ್ ಎಂಬುವರು ಹಾಟ್ ಸೀಟ್ನಲ್ಲಿ ಕುಳಿತಿದ್ದರು. ಬಿಗ್ ಬಿ ಅಮಿತಾಭ್ ಬಚ್ಚನ್ 6,40,000 ರೂಪಾಯಿಗೆ ಪ್ರಶ್ನೆಯೊಂದನ್ನು ಕೇಳಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ.
927ರ ಡಿಸೆಂಬರ್ 25ರಂದು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಅವರ ಅನುಯಾಯಿಗಳು ಯಾವ ಗ್ರಂಥದ ಪ್ರತಿಗಳನ್ನು ಸುಟ್ಟು ಹಾಕಿದರು?
ಆಯ್ಕೆಗಳು: ಎ. ವಿಷ್ಣುಪುರಾಣ, ಬಿ. ಭಗವದ್ಗೀತೆ, ಸಿ. ಋಗ್ವೇದದಡಿ, ಡಿ. ಮನುಸ್ಮೃತಿ
ಸ್ಪರ್ಧಿಗಳು ಆಯ್ಕೆ ಡಿ. ಮನುಸ್ಮೃತಿಯನ್ನು ಉತ್ತರವಾಗಿ ಹೇಳಿದ್ದರು. ಇದು ಸರಿ ಉತ್ತರವೆಂದು ಘೋಷಿಸಿದ ಅಮಿತಾಭ್ ಬಚ್ಚನ್, ವಿವರಣೆಯಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರಾಚೀನ ಹಿಂದೂ ಧರ್ಮ ಗ್ರಂಥದ ಪ್ರತಿಗಳನ್ನು ಖಂಡಿಸಿ ಸುಟ್ಟುಹಾಕಿದರು ಎಂದು ವಿವರಣೆ ನೀಡಿದ್ದಾರೆ.
ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ನೆಟ್ಟಿಗರು ಟ್ವಿಟ್ಟರ್ನಲ್ಲಿ ಕಾರ್ಯಕ್ರಮದ ವಿರುದ್ಧ ಕಿಡಿಕಾರಿದ್ದಾರೆ. ಹಾಗೆಯೇ ಸಿನಿಮಾ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ತಮ್ಮ ಟ್ವಿಟರ್ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
ಅದರ ಜತೆಗೆ ಹಿಂದು ಜನ ಜಾಗರಣಾ ಸಮಿತಿಯು ಅಮಿತಾಭ್ ಬಚ್ಚನ್ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದೆ.