ಬೆಂಗಳೂರು, ನ. 13: ಹಿರಿಯ ಪತ್ರಕರ್ತ, ಬರಹಗಾರ ರವಿ ಬೆಳಗೆರೆ ಇನ್ನಿಲ್ಲ. ಹೃದಯಾಘಾತದಿಂದ ಹಿರಿಯ ಪತ್ರಕರ್ತ ರವಿ ಬೆಳಗೆರೆ ನಿಧನರಾಗಿದ್ದಾರೆ. ಗುರುವಾರ ತಡರಾತ್ರಿ “ಹಾಯ್ ಬೆಂಗಳೂರ್” ಕಚೇರಿಯಲ್ಲೇ ಅವರಿಗೆ ಹೃದಯಾಘಾತವಾಗಿದೆ. ಕೂಡಲೆ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಶುಕ್ರವಾರ ಬೆಳ್ಳಗ್ಗೆ 9 ಗಂಟೆಯಿಂದ ಬೆಂಗಳೂರಿನ ಪ್ರಾರ್ಥನಾ ಶಾಲೆಯಲ್ಲಿ ರವಿ ಬೆಳಗೆರೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಸರ್ಪ ಸಂಬಂಧ, ಭೀಮಾತೀರದ ಹಂತಕರು, ನೀ ಹಿಂಗ ನೋಡಬೇಡ ನನ್ನ, ಡಿ ಕಂಪನಿ, ರಾಜ್ ಲೀಲಾ ವಿನೋದ ಸೇರಿದಂತೆ ಹಲವು ಕೃತಿಗಳು ಬೆಳಗೆರೆ ಕೊಡುಗೆ.
ಶಿಕ್ಷಣವನ್ನ ಬಳ್ಳಾರಿಯಲ್ಲಿ ಮುಗಿಸಿದ್ದ ರವಿಬೆಳಗೆರೆ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ್ದರು. ನಂತರ ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಆರಂಭ ಮಾಡುತ್ತಾರೆ. 1995 ರಲ್ಲಿ ಹಾಯ್ ಬೆಂಗಳೂರು ವಾರ ಪತ್ರಿಕೆ ಪ್ರಾರಂಭ ಮಾಡುತ್ತಾರೆ. ಕ್ರೈಂ ಡೈರಿ ಕಾರ್ಯಕ್ರಮದ ನಿರೂಪಕರಾಗಿದ್ದ ರವಿ ಬೆಳಗೆರೆ ದೊಡ್ಡ ಹೆಸರು ಸಂಪಾದಿಸಿದ್ದರು.
ಕಿರುತೆರೆಯಲ್ಲಿಯೂ ಬೆಳಗೆರೆ ಕಾಣಿಸಿಕೊಂಡಿದ್ದು ಅವರ ನಿರೂಪಣೆ ಮೆಚ್ಚುಗೆಗೆ ಪಾತ್ರವಾಗಿತ್ತು. ಬಿಗ್ ಬಾಸ್ ನ ಕೊನೆಯ ಸೀಸನ್ ನಲ್ಲಿಯೂ ಬೆಳಗೆರೆ ಭಾಗವಹಿಸಿದ್ದರು.