ನವದೆಹಲಿ ಸೆ 04: ವಾಹನಗಳ ಕರ್ಕಶ ಧ್ವನಿಯಿಂದ ಸಾಕಷ್ಟು ಜನರು ಬೇಸತ್ತಿರುವುದನ್ನು ನಾವು ನೋಡಿದ್ದೇವೆ ಯಾಕಪ್ಪ ಈ ರೀತಿಯಾಗಿ ಹಾರ್ನ್ ಮಾಡುತ್ತಾರೆ ಎಂದು ಸಾಕಷ್ಟು ಜನರು ಬೈದಿದ್ದು ಉಂಟು ಜೊತೆಗೆ ಬೇಸರ ಮಾಡಿಕೊಂಡಿದ್ದು ಇದೆ.
ಆದರೆ ಇದೀಗ ಈ ರೀತಿಯ ಕರ್ಕಶ ಹಾರ್ನ್ ಧ್ವನಿಗೆ ಬದಲಾಗಿ ಬೇರೆ ಹಾರ್ನ್ ಗಳನ್ನು ಅಳವಡಿಸಬೇಕೆಂಬ ಒತ್ತಡ ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಹೊಸ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದ್ದು, ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ರಸ್ತೆ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ, ನಾನು ನಾಗಪುರದಲ್ಲಿರುವ ಕಟ್ಟಡದಲ್ಲಿ 11ನೇ ಅಂತಸ್ತಿನಲ್ಲಿ ವಾಸಿಸುತ್ತಿದ್ದೇನೆ. ಆದರೂ ಮುಂಜಾನೆ ಪ್ರಾಣಾಯಾಮ ಮಾಡುವಾಗ ವಾಹನಗಳ ಹಾರ್ನ್ ಏಕಾಗ್ರತೆಯನ್ನು ಹಾಳು ಮಾಡುತ್ತದೆ ಎಂದ ಅವರು ವಾಹನಗಳು ಹಾರ್ನ್ ಮಾಡಿದಾಗ ಅದರಿಂದ ಹೊರಹೊಮ್ಮುವ ಕರ್ಕಶ ಧ್ವನಿಗೆ ಬೇಸರ ಪಡುವವರೇ ಹೆಚ್ಚು. ಆದರೆ ಮುಂದಿನ ದಿನಗಳಲ್ಲಿ ಇಂಥ ಕರ್ಣಕಠೋರ ಶಬ್ದಕ್ಕೆ ಬದಲಾಗಿ ಭಾರತೀಯ ಸಂಗೀತದ ವಾದ್ಯಗಳಾದ ತಬಲಾ, ಪಿಟೀಲು, ಕೊಳಲು ಸೇರಿದಂತೆ ನಾನಾ ವಾದ್ಯಗಳ ಮಧುರ ಧ್ವನಿ ಅಳವಡಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ ಎಂದು ಅವರು ಹೇಳಿದರು.