ಬೆಂಗಳೂರು, ಡಿ. 20: ಜಾತ್ರೆ, ರಥೋತ್ಸವ, ಉತ್ಸವ ಹಾಗೂ ಇತರೆ ವಿಶೇಷ ಕಾರ್ಯಕ್ರಮಗಳಂದು ಹುಂಡಿಗಳ ನಿರ್ವಹಣೆಯನ್ನು ಖಾಸಗಿಯವರು ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಒಂದುವೇಳ ಅಂತಹ ಪ್ರಕರಣ ಕಂಡುಬಂದಲ್ಲಿ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ ಎಂಬುದಾಗಿ ಧಾರ್ಮಿಕ ದತ್ತಿ ಇಲಾಖೆ ಎಚ್ಚರಿಕೆ ನೀಡಿದೆ. ಈ ಕುರಿತಂತೆ ಸುತ್ತೋಲೆ ಹೊರಡಿಸಿರುವ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಅಧಿಸೂಚಿತ ದೇವಾಲಯಗಳಲ್ಲಿ ನಡೆಯಲಿರುವ ಜಾತ್ರೆ, ರಥೋತ್ಸವ, ಉತ್ಸವ ಹಾಗೂ ಇತರೆ ವಿಶೇಷ ಕಾರ್ಯಕ್ರಮಗಳಂದು ಖಾಸಗಿ ವ್ಯಕ್ತಿಗಳು ಹುಂಡಿಗಳನ್ನು ಇಟ್ಟು, ಹುಂಡಿಯಿಂದ ಸಂಗ್ರಹವಾಗುವ ಹಣವನ್ನು ಖಾಸಗಿಯವರು ನಿರ್ವಹಿಸುತ್ತಿರುವ ಬಗ್ಗೆ ಹಲವಾರು ದೂರುಗಳು ಬಂದ ಹಿನ್ನೆಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯ 1997ರ ಕಲಂ 69(ಬಿ)ರಂತೆ, ಯೊವೊಬ್ಬ ವ್ಯಕ್ತಿಯು, ಯಾವುದೇ ಸಂಸ್ಥೆಯು ಸೇವಾ ಸಮಿತಿ ಅಥವಾ ಅಭಿವೃದ್ಧಿ ಸಂಸ್ಥೆಯು ನೋಂದಾಯಿತವಾಗಿರಲಿ ಅಥವಾ ನೋಂದಾಯಿತವಾಗಿಲ್ಲದಿರಲಿ, ನಿಯಮಿಸಲಾದ ಪ್ರಾಥಿಕಾರದಿಂದ ಅದು ಮಂಜೂರಾತಿ ಪಡೆದ ಹೊರತು, ಅಧಿಸೂಚಿತ ಸಂಸ್ಥೆಯ ಅಥವಾ ಘೋಷಿತ ಸಂಸ್ಥೆಯ ಹೆಸರಿನಲ್ಲಿ, ಯಾವುದೇ ಉದ್ದೇಶಕ್ಕಾಗಿ ಸೇವಾ ನಿಧಿಯನ್ನು ಅಥಾವ ದೇಣಿಗೆಯನ್ನು ಸಂಗ್ರಹಿಸಲು ಹಕ್ಕನ್ನು ಹೊಂದಿರತಕ್ಕದ್ದಲ್ಲ ಎಂದು ತಿಳಿಸಲಾಗಿದೆ.