ಮಂಡ್ಯ, ಜೂ. 09: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಕಾರ್ಯಕ್ಷಮತೆ ಆಧಾರಿತ ಸಿನಿಮಾ ಸದ್ದಿಲ್ಲದೇ ಸೆಟ್ಟೇರಲು ತಯಾರಿ ನಡೆದಿದೆ.
ಕಳೆದ ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ನಡೆದ ಐಎಎಸ್ ಅಧಿಕಾರಿ ಶಿಲ್ಪಾನಾಗ್ ಅವರ ಜೊತೆಗಿನ ತಿಕ್ಕಾಟದ ನಂತರ ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾನಾಗ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ ಈ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ನಡುವಿನ ಹಗ್ಗಜಗ್ಗಾಟದ ಸುದ್ದಿ ರಾಜ್ಯಮಟ್ಟದಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಆದರೆ ಈ ಎಲ್ಲಾ ಬೆಳವಣಿಗೆ ತಣ್ಣಗಾಗುತ್ತಿದ್ದಂತೆ ರೋಹಿಣಿ ಸಿಂಧೂರಿ ಅವರ ಆಡಳಿತ ವೈಖರಿಯನ್ನೇ ಕಥಾ ವಸ್ತುವಾಗಿ ರೂಪಿಸಿರುವ ‘ಭಾರತ ಸಿಂಧೂರಿ’ ಶೀರ್ಷಿಕೆಯೊಂದಿಗೆ ಬಯೋಪಿಕ್ ಸಿನಿಮಾಗೆ ಪೂರ್ವ ತಯಾರಿ ನಡೆದಿದೆ.
ತಮ್ಮ ಡೋಂಟ್ ಕೇರ್ ಆ್ಯಟಿಟ್ಯೂಡ್ ಮೂಲಕವೇ
ರಾಜ್ಯದ ದಕ್ಷ ಐಎಎಸ್ ಅಧಿಕಾರಿ ಎಂದೇ ಹೆಸರಾಗಿರುವ ರೋಹಿಣಿ ಸಿಂಧೂರಿ ಅವರ ಕಾಯಕ ಆಧಾರಿತ ಈ ಸಿನಿಮಾ ನಿರ್ಮಾಣಕ್ಕೆ ಈಗಾಗಲೇ ಸಿದ್ಧತೆ ನಡೆದಿದೆ. ಲಾಕ್ ಡೌನ್ ಬಳಿಕ ಈ ಸಿನಿಮಾ ಸೆಟ್ಟೇರುವ ಸಾಧ್ಯತೆ ಹೆಚ್ಚಾಗಿದೆ.
ಮಹಿಳಾ ಪ್ರಧಾನ ಚಿತ್ರಕ್ಕೆ ಮಂಡ್ಯದ ಹುಡುಗಿ ಅಕ್ಷತಾ ಪಾಂಡುಪುರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಸಂಬಂಧ ಈಗಾಗಲೇ ಸಿನಿಮಾದ ಟೈಟಲ್ ನೋಂದಣಿಯಾಗಿದೆ. ಕಸಾಪ ಚುನಾವಣೆ ಮತ್ತು ಲಾಕ್ ಡೌನ್ ನಂತರ ಸಿನಿಮಾ ಸೆಟ್ಟೇರಲಿದೆ.
ಈ ಸಿನಿಮಾದ ಕಥೆ, ಚಿತ್ರಕಥೆ, ಸಾಹಿತ್ಯ, ರಚನೆ ಹಾಗೂ ನಿರ್ದೇಶನವನ್ನು ಮಂಡ್ಯದವರೇ ಆದ ಕವಿ, ಪತ್ರಕರ್ತ, ಸಂಘಟಕ ಎಸ್. ಕೃಷ್ಣಸ್ವರ್ಣಸಂದ್ರ ಮಾಡಲಿದ್ದಾರೆ. ಈಗಾಗಲೇ ನಾಡಿನ ಹಲವಾರು ದಕ್ಷ ಹಾಗೂ ಪ್ರಾಮಾಣಿಕ ಐಎಎಸ್ , ಐಪಿಎಸ್ ಅಧಿಕಾರಿಗಳಿಗೆ ಫ್ಯಾನ್ ಫಾಲೋವರ್ಸ್ ಇರೋದು ಕಂಡಿದ್ದೇವೆ ಈ ಕಾರಣಕ್ಕೆ ಇಂಥ ಅಧಿಕಾರಿಗಳ ಜೀವನ ಆಧಾರಿತ ಸಿನಿಮಾಗಳು ತಯಾರಾಗಿ ಅವು ಗಲ್ಲಾ ಪೆಟ್ಟಿಗೆಯಲ್ಲೂ ಯಶಸ್ವಿಯಾದ ಇತಿಹಾಸವಿದೆ.
ಈ ಸಾಲಿನಲ್ಲಿ ಇದೀಗ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸೇರ್ಪಡೆ. ಸೋಷಿಯಲ್ ಮೀಡಿಯಾದಲ್ಲಿ ಅಪಾರ ಫಾಲೋವರ್ಸ್ ಹೊಂದಿರುವ ಸಿಂಧೂರಿ ಅವರ ಕಾಯಕ ಆಧಾರಿತ ‘ ಭಾರತಸಿಂಧೂರಿ’ ಸಿನಿಮಾ ಸೆಟ್ಟಿರುತ್ತಿರುವ ಸುದ್ದಿ ಬಂದಿದೆ.