ಕೇವಲ ಒಗ್ಗರಣೆಗೆ ಮಾತ್ರ ಹೆಚ್ಚಾಗಿ ಉಪಯೋಗಿಸುವ ಬೆಳ್ಳುಳ್ಳಿಯಲ್ಲಿ ಆರೋಗ್ಯವಿದೆ ಎಂದರೆ ನಂಬುತ್ತೀರಾ? ನಂಬಲೇಬೇಕು. ಏಕೆಂದರೆ ಆರೋಗ್ಯದ ರಕ್ಷಣೆಯಲ್ಲಿ ಬೆಳ್ಳುಳ್ಳಿ ಅತ್ಯಂತ ಸಹಕಾರಿಯಾಗಿದೆ. ಬೆಳ್ಳುಳ್ಳಿಯಲ್ಲಿ ಆಂಟಿ-ಆಕ್ಸಿಡೆಂಟ್ಗಳು ಹೇರಳವಾಗಿದ್ದು ರಕ್ತದ ಶುದ್ಧೀಕರಣ ಮಾಡುತ್ತದೆ. ಪ್ರತೀ ದಿನ ನಾಲ್ಕೈದು ಬೆಳ್ಳುಳ್ಳಿಯ ಎಸಳುಗಳನ್ನು ಕಾಯಿಸಿ ತಿನ್ನಬೇಕು. ಹಸಿಯಾಗಿಯೂ ತಿನ್ನಬಹುದು. ಇದರಿಂದ ನಮ್ಮ ಮೂತ್ರಪಿಂಡಗಳಲ್ಲಿರುವ ತ್ಯಾಜ್ಯ ವಸ್ತುಗಳನ್ನು ಹೊರಹಾಕಲು ಸಹಾಯ ಮಾಡುವುದು.
ಬೆಳ್ಳುಳ್ಳಿ ತಿನ್ನುವುದರಿಂದ ನಮ್ಮ ದೇಹವು ಸ್ವಚ್ಛ ಹಾಗೂ ಆರೋಗ್ಯವಾಗಿ ರೋಗಮುಕ್ತವಾಗುತ್ತದೆ. ಪ್ರತೀ ದಿನ ಬೆಳ್ಳುಳ್ಳಿಯನ್ನು ಕಾಯಿಸಿ ತಿನ್ನುವುದರಿಂದ ದೇಹದ ಕೊಬ್ಬು ಕರಗಿ ತೂಕ ಕಳೆದುಕೊಳ್ಳುವಲ್ಲಿ ಕೂಡಾ ಇದು ಸಹಾಯಕವಾಗುವುದು. ರೋಗನಿರೋದಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ. ಜ್ವರ ಬಂದಾಗ ಬೆಳ್ಳುಳ್ಳಿಯನ್ನು ತಿಂದರೆ ಜ್ವರ ಕಡಿಮೆಯಾಗುತ್ತದೆ. ವಾಂತಿ ಬೇಧಿಯಾದರೆ ಬೆಳ್ಳುಳ್ಳಿಯನ್ನು ಕಾಯಿಸಿ ಅದರೊಂದಿಗೆ ಸ್ವಲ್ಪ ಓಂಕಾಳು ಸೇರಿಸಿ ತಿಂದರೆ ಹೊಟ್ಟೆ ನಿರಾಳವಾಗುತ್ತದೆ.