ಬೆಂಗಳೂರು, ಮಾ. 16: ಕೇರಳದಲ್ಲಿ ಕಿಲ್ಲರ್ ಕೊರೊನಾ ಸಿಕ್ಕಾಪಟ್ಟೆ ಆತಂಕ ಸೃಷ್ಟಿಸಿದ್ದು, ಇದರ ಪರಿಣಾಮ ಮೈಸೂರಲ್ಲೂ ಆತಂಕ ಶುರುವಾಗಿದೆ. ಹೀಗಾಗಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸೋ ಜನರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಮೈಸೂರಿಗೆ ಬರುವ ವಾಹನಗಳ ತಪಾಸಣೆಯನ್ನ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ.
ಈಗಾಗಲೇ ಕೊರೊನಾ 2ನೇ ಅಲೆ ಹಿನ್ನೆಲೆ, ಕೇರಳ- ಕರ್ನಾಟಕ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಹೆಚ್.ಡಿ. ಕೋಟೆ ತಾಲೂಕಿನ ಬಾವಲಿ ಚೆಕ್ ಪೋಸ್ಟ್ ನಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ನೇತೃತ್ವದಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆ ತಂಡದಿಂದ ಕೇರಳದಿಂದ ರಾಜ್ಯಕ್ಕೆ ಬರುವ ಪ್ರತಿಯೊಬ್ಬರ ಥರ್ಮಲ್ ಸ್ಕ್ಯಾನಿಂಗ್ ನಡೆಸಲಾಗುತ್ತಿದ್ದು, ಹೈ ಟೆಂಪರೇಚರ್ ಇದ್ದರೆ ಪ್ರವೇಶ ನಿರಾಕರಿಸಲಾಗುತ್ತಿದೆ.
ಪ್ರಮುಖವಾಗಿ ಕೋಟೆ ಭಾಗದಿಂದ ವಾಹನಗಳು ಎಂಟ್ರಿ ಆಗ್ತವೆ . ಹೀಗಾಗಿ ಈ ಪ್ರದೇಶವನ್ನ ಸೂಕ್ಷ್ಮ ಪ್ರದೇಶ ಅಂತ ಜಿಲ್ಲಾಡಳಿತ ಮಾರ್ಕ್ ಮಾಡಿದೆ. ರಾಜ್ಯದಲ್ಲಿ ವಾರದಿಂದ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದ್ದು, ಮೈಸೂರು ಜಿಲ್ಲೆಯಲ್ಲೂ ಎರಡಂಕಿ ತಲುಪಿದೆ. ಜತೆಗೆ ಸಾವಿನ ಪ್ರಕರಣವೂ ದಿನೇ ದಿನೇ ದಾಖಲಾಗುತ್ತಿರುವುದರಿಂದ ಕೋವಿಡ್ ನಿಯಂತ್ರಣಕ್ಕೆ ಮತ್ತೊಮ್ಮೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿಗಳನ್ನು ನೀಡಿದೆ.
ಅದರಂತೆ ಮೈಸೂರು ಜಿಲ್ಲೆಯಲ್ಲಿ ಕೋವಿಡ್-19 ಪ್ರತಿನಿತ್ಯ ನಡೆಸೋ ಪರೀಕ್ಷಾ ಪ್ರಮಾಣವನ್ನು 3000ದಿಂದ 5000ಕ್ಕೆ ಹೆಚ್ಚಿಸಲಾಗಿದೆ. ಈ ಹಿಂದಿನಂತೆ ಪೂರ್ಣ ಪ್ರಮಾಣದಲ್ಲಿ ಪರೀಕ್ಷೆ ನಡೆಸಲು, ಆರ್ಟಿಪಿಸಿಆರ್ ಪರೀಕ್ಷಾ ಕೇಂದ್ರವನ್ನು ಅಧಿಕಗೊಳಿಸಲು ಜಿಲ್ಲಾಧಿಕಾರಿ ಹಾಗೂ ಆರೋಗ್ಯಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಟ್ಟಿನಲ್ಲಿ ಮಹಾಮಾರಿ ಕೋವಿಡ್ ಮತ್ತೆ ಆಟ ಶುರುಮಾಡಿದ್ದು , ಮೈಸೂರಿಗೆ ಸಂಪರ್ಕಿಸೋ ಗಡಿಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.