ಹಿಸ್ಸಾರ್ ಅ 18 : ಜಾತಿ ನಿಂದನೆ ಪ್ರಕರಣದಡಿ ಮಾಜಿ ಕ್ರಕಿಟಿಗಾ ಯುವರಾಜ್ ಸಿಂಗ್ ಅವರನ್ನು ಹರ್ಯಾಣ ಪೊಲೀಸರು ಬಂಧಿಸಿದ್ದಾರೆ. ಬಳಿಕ ಮಧ್ಯಂತರ ಜಾಮೀನಿನ ಮೇಲೆ ಯುವರಾಜ್ ಸಿಂಗ್ ಅವರನ್ನು ಬಿಡುಗಡೆ ಮಾಡಲಾಗಿದೆ.
2020ರ ಜೂನ್ನಲ್ಲಿ ರೋಹಿತ್ ಶರ್ಮಾ ಜೊತೆಗೆ ಲೈವ್ ಚಾಟ್ನಲ್ಲಿ ಭಾಗವಹಿಸಿದ್ದ ಯುವರಾಜ್, ತಮ್ಮ ಸಂಭಾಷಣೆ ವೇಳೆ ಯಜುವೇಂದ್ರ ಚಹಲ್ ಮತ್ತು ಕುಲ್ದೀಪ್ ಯಾದವ್ ಬಗ್ಗೆ ಜಾತಿ ಸೂಚಕ ಪದ ಬಳಸಿದ್ದರು. ಚಹಲ್ ಮಾಡೋ ಟಿಕ್-ಟಾಕ್ ವೀಡಿಯೊ ಬಗ್ಗೆ ಪ್ರಸ್ತಾಪಿಸಿದ್ದ ಯುವಿ , ಈ ಯುಜಿ ಹಾಗೂ ಕುಲ್ದೀಪ್ಗೆ ಬೇರೆ ಕೆಲಸ ಇಲ್ಲ ಎಂದಿದ್ದರು. ಇದೇ ವೇಳೆ ಜಾತಿಯನ್ನು ಪ್ರಸ್ತಾಪಿಸಿ ಹೀಯಾಳಿಸಿದ್ದರು.
ಈ ವಿಚಾರ ವೈರಲ್ ಆಗುತ್ತಿದ್ದಂತೆ ಯುವರಾಜ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದರು. ಆದರೆ ಈ ಬಗ್ಗೆ ದಲಿತ ಮಾನವ ಹಕ್ಕುಗಳ ವಕೀಲ ಕನ್ವೀನರ್ ರಜತ್ ಕಲ್ಸನ್ ಅವರು ದೂರು ನೀಡಿದ್ದರು. ಅದರಂತೆ ಹರ್ಯಾಣದ ಹಿಸಾರ್ನ ಹಂಸಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಯುವರಾಜ್ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 153, 153 ಎ, 295, 505 ಮತ್ತು ಎಸ್ಸಿ / ಎಸ್ಟಿ ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಇದೀಗ ಯುವರಾಜ್ ಸಿಂಗ್ ಅವರನ್ನು ಬಂಧಿಸಿರುವ ಹಂಸಿ ಠಾಣಾ ಪೊಲೀಸರು ಘಟನೆಯ ಬಗ್ಗೆ ವಿಚಾರಣೆ ನಡೆಸಿದರು. ಬಳಿಕ ಹೈಕೋರ್ಟ್ ಆದೇಶದ ಮೇರೆಗೆ ಯುವರಾಜ್ ಸಿಂಗ್ ಅವರನ್ನು ಔಪಚಾರಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಯುವರಾಜ್ ಸಿಂಗ್ ಅವರು ಶನಿವಾರ ಹಂಸಿಗೆ ಆಗಮಿಸದರು ಮತ್ತು ನಾವು ಔಪಚಾರಿಕ ಅವರ ಬಂಧಿಸಿ ಕೆಲವು ಗಂಟೆಗಳ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ಹಂಸಿ ಡಿಎಸ್ಪಿ ವಿನೋದ್ ಶಂಕರ್ ಅವರು ಹೇಳಿದ್ದಾರೆ.