ಮಂಗಳೂರು ಜ 4 : ಉಳ್ಳಾಲದ ಮಾಜಿ ಶಾಸಕ ಬಿ.ಎ.ಇದಿನಬ್ಬ ಪುತ್ರನ ಮನೆ ಮೇಲೆ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ದಳ(ಎನ್ಐಎ)ದ ಅಧಿಕಾರಿಗಳ ತಂಡ, ಐಸಿಸ್ ಜತೆ ನಂಟು ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಸೊಸೆ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಎಂಬಾಕೆಯನ್ನು ಬಂಧಿಸಲಾಗಿದೆ. ಉಳ್ಳಾಲದ ಮಾಸ್ತಿಕಟ್ಟೆಯ ಮನೆ ಮೇಲೆ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು ಮರಿಯಂರನ್ನು ವಶಕ್ಕೆ ಪಡೆದು, ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆ ಬಳಿಕ ಎನ್ಐಎ ಅಧಿಕಾರಿಗಳು ನೇರವಾಗಿ ದೆಹಲಿಗೆ ಕರೆದೊಯ್ಯಲಿದ್ದಾರೆ. ಎನ್ಐಎ ಸಹಾಯಕ ತನಿಖಾಧಿಕಾರಿ ಕೃಷ್ಣ ಕುಮಾರ್ (ಡಿಎಸ್ಪಿ) ಅವರ ನೇತೃತ್ವದ ಆಜಯ್ ಸಿಂಗ್ ಪಿಐ, ಮೋನಿಕಾ ಧಿಕ್ವಾಲ್ ಮತ್ತಿತರ ಎನ್ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಎನ್ಐಎ ಅಧಿಕಾರಿಗಳು ಮಾಜಿ ಶಾಸಕ ಬಿ.ಎ. ಇದಿನಬ್ಬ ಅವರ ಪುತ್ರನ ಮನೆಯ ಮನೆ ಮೇಲೆ ಕಳೆದ ಅಗಸ್ಟ್ 4ರಂದು ದಾಳಿ ನಡೆಸಿದ್ದು, ಎರಡು ದಿನಗಳ ದಾಳಿಯ ಬಳಿಕ ಬಾಷಾ ಕಿರಿಯ ಪುತ್ರ ಅಬ್ದುಲ್ ರೆಹಮಾನ್ ಅವರನ್ನು ಬಂಧಿಸಿದ್ದರು.