- ರಸ್ತೆ ಗುಂಡಿಗಳಿಂದ ಪ್ರಯಾಣದ ಅವಧಿ ಹೆಚ್ಚಳ
- ಕಂಪನಿಗಳ ಸ್ಥಳಾಂತರ ಚಿಂತನೆ ನಡೆಸುತ್ತಿರುವ ಐಟಿ ದಿಗ್ಗಜರು (IT tycoons raise voice over Bengalurus potholes)
- ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದೇವೆ ಎಂದ ಡಿಸಿಎಂ ಡಿಕೆ ಶಿವಕುಮಾರ್
Bengaluru: ಬೆಂಗಳೂರು ಭಾರತದಲ್ಲಿ ಐಟಿ ಹಬ್ ಎಂದು ಕರೆಯಲ್ಪಡುವ ನಗರ. ಅನೇಕ ಐಟಿ ಕಂಪನಿಗಳು, ಸ್ಟಾರ್ಟಪ್ಗಳು ಮತ್ತು ಉದ್ಯಮಿಗಳು ಇಲ್ಲಿ ನೆಲೆಸಿದ್ದಾರೆ.
ಆದರೆ ಇತ್ತೀಚಿನ ದಿನಗಳಲ್ಲಿ ಈ ನಗರದ ದೊಡ್ಡ ಸಮಸ್ಯೆ ರಸ್ತೆಗುಂಡಿಗಳು. ಮಳೆ ಬಂದಾಗ ರಸ್ತೆ ಇನ್ನಷ್ಟು ಹಾಳಾಗುತ್ತವೆ. ಈ ಕಾರಣದಿಂದ ಜನ ಸಾಮಾನ್ಯರು ಮಾತ್ರವಲ್ಲ,
ದೊಡ್ಡ ಉದ್ಯಮಿಗಳೂ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕೆಲ ಕಂಪನಿಗಳು ತಮ್ಮ ಕಚೇರಿಯನ್ನು ಬೇರೆ ನಗರಕ್ಕೆ ಸ್ಥಳಾಂತರಿಸಲು ನಿರ್ಧರಿಸುತ್ತಿವೆ.
ಪ್ರಸಿದ್ಧ ಉದ್ಯಮಿ ಮತ್ತು ಹೂಡಿಕೆದಾರ ಮೋಹನ್ ದಾಸ್ ಪೈ(Mohandas Pai) ಅವರು ರಸ್ತೆ ಸಮಸ್ಯೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಟ್ವೀಟ್ ಮಾಡಿ, ಬೆಂಗಳೂರು ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ.
ಅನೇಕ ಕಂಪನಿಗಳು ಈ ಪರಿಸ್ಥಿತಿಯಿಂದ ಬೇಸತ್ತು ಹೊರ ಹೋಗಲು ಯೋಚಿಸುತ್ತಿವೆ. ಔಟರ್ ರಿಂಗ್ ರೋಡ್ ಭಾಗದಲ್ಲಿ ಪರಿಸ್ಥಿತಿ ಇನ್ನಷ್ಟು ಕೆಟ್ಟಿದೆ ಎಂದು ಹೇಳಿದ್ದಾರೆ.
ಅವರು ನಗರಾಭಿವೃದ್ಧಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(D.K. Shivakumar) ಅವರನ್ನು ನೇರವಾಗಿ ಟ್ಯಾಗ್ ಮಾಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಇನ್ನು ಬ್ಲಾಕ್ಬಕ್(Blackbuck) ಸಂಸ್ಥೆಯ ಸಿಇಒ ರಾಜೇಶ್ ಯಾಬಾಜಿ ಅವರು ರಸ್ತೆ ಸಮಸ್ಯೆಯಿಂದ ಬೇಸತ್ತು ತಮ್ಮ ನಿರ್ಧಾರವನ್ನು ಸಾರ್ವಜನಿಕವಾಗಿ ತಿಳಿಸಿದ್ದಾರೆ. ಅವರ ಮಾತುಗಳಲ್ಲಿ,
ಬೆಳ್ಳಂದೂರಿನಲ್ಲಿ ನಾವು ಒಂಬತ್ತು ವರ್ಷಗಳಿಂದ ಕಚೇರಿಯನ್ನು ನಡೆಸುತ್ತಿದ್ದೇವೆ. ಆದರೆ ಪ್ರತಿದಿನ ಕಚೇರಿಗೆ ಹೋಗಲು ಕನಿಷ್ಠ 90 ನಿಮಿಷ ಹಿಡಿಯುತ್ತಿದೆ. ಕಳೆದ ಐದು ವರ್ಷಗಳಲ್ಲಿ ಯಾವುದೇ ಸುಧಾರಣೆ ಆಗಿಲ್ಲ.
ರಸ್ತೆ ಗುಂಡಿಗಳು ಮತ್ತು ಧೂಳಿನಿಂದ ತುಂಬಿವೆ. ಹೀಗಾಗಿ ನಾವು ಕಚೇರಿಯನ್ನು ಬೇರೆ ಕಡೆಗೆ ಸ್ಥಳಾಂತರಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಅವರ ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕ ಉದ್ಯಮಿಗಳು ಸಹ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಸಹ ಇದೇ ವಿಷಯವನ್ನು ಹಂಚಿಕೊಂಡಿದ್ದಾರೆ. “ನಗರದ ಪರಿಸ್ಥಿತಿ ಗಂಭೀರವಾಗಿದೆ. ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ.
ಇಲ್ಲವಾದರೆ ಉದ್ಯಮ ಮತ್ತು ಹೂಡಿಕೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ” ಎಂದು ಅವರು ಹೇಳಿದ್ದಾರೆ. ಇನ್ನು ಈ ಸಮಸ್ಯೆ ಕುರಿತು ಕೇವಲ ಉದ್ಯಮಿಗಳು ಮಾತ್ರವಲ್ಲ,
ಪುಟ್ಟ ಮಕ್ಕಳೂ ತಮ್ಮ ಅಸಮಾಧಾನವನ್ನು ತೋರಿಸಿದ್ದಾರೆ. ಮಕ್ಕಳು “ನಮ್ಮ ಅಪ್ಪ-ಅಮ್ಮ ಟ್ಯಾಕ್ಸ್ ಕಟ್ಟುತ್ತಾರೆ. ಆದರೂ ರಸ್ತೆ ಹಾಳಾಗಿದೆ. ಯಾವಾಗ ಸರಿಮಾಡುತ್ತೀರಿ?”
ಎಂದು ನೇರವಾಗಿ ಪ್ರಧಾನಿ ನರೇಂದ್ರ ಮೋದಿ(PM Narendra Modi) ಮತ್ತು ಸಿಎಂ ಸಿದ್ದರಾಮಯ್ಯ(CM Siddaramaiah) ಅವರಿಗೆ ಪ್ರಶ್ನೆ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆದಿದೆ.
ಈ ಕುರಿತಾಗಿ ಬಿಬಿಎಂಪಿ ಆಯುಕ್ತ ಮಹೇಶ್ವರ್ ರಾವ್ ಅವರು ಸಮಸ್ಯೆಯ ಮೂಲವನ್ನು ವಿವರಿಸಿದ್ದಾರೆ. ಅವರು, ಔಟರ್ ರಿಂಗ್ ರೋಡ್ನಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ.
ಅದರಿಂದ ಗುಂಡಿಗಳನ್ನು ಸರಿಯಾಗಿ ಮುಚ್ಚಲು ಸಾಧ್ಯವಾಗುತ್ತಿಲ್ಲ. ಮಳೆ ಬಂದಾಗ ಪರಿಸ್ಥಿತಿ ಇನ್ನಷ್ಟು ಕಷ್ಟವಾಗುತ್ತಿದೆ. ಆದರೂ ನಾವು ಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತಿದ್ದೇವೆ.
ಇದನ್ನು ಓದಿ : ಕುಟುಂಬ ರಾಜಕೀಯದಲ್ಲಿ ಕರ್ನಾಟಕಕ್ಕೆ 4 ನೆಯ ಸ್ಥಾನ : ಉತ್ತರ ಪ್ರದೇಶ ಪ್ರಥಮ
ಮೆಟ್ರೋ ಕಾಮಗಾರಿ ಪೂರ್ಣವಾದ ನಂತರ ರಸ್ತೆ ಸರಾಗವಾಗುತ್ತವೆ ಎಂದು ತಿಳಿಸಿದ್ದಾರೆ. (IT tycoons raise voice over Bengalurus potholes)